Friday, April 10, 2020

ಅಪ್ಪ


ಅಮ್ಮನ ಸೆರಗಂಚು ಹಿಡಿದು
ಅಪ್ಪನಿಂಬ ಜೊತೆ ಜಗವ ನೋಡುವ ಕಾಲದಲ್ಲಿ
ಅಪ್ಪನ ಎದೆ ತುಂಬಾ ನನ್ನ ಪುಟ್ಟ ಕೈ ಬಳಸಿ
ಆತನ ನೇವರಿಪ ತೋಳಲ್ಲಿ ನಾ ನಿದ್ರಿಸಲು
ಅಪ್ಪ ಪಟ್ಟ ಸಂತ್ರುಪ್ತಿಯ ಆಳ ತಿಳಿಯಲು
ನಾನೂ ಅಪ್ಪನಾಗಬೇಕಾಯಿತು.

ನನ್ನಯ ತುಂಟಾಟಗಳು ಹದ್ದು ಮೀರಿದಾಗ
ಅಮ್ಮನ ಒಂದೇಟಿನ ಬಿಸಿ ನನ್ನ ತಾಕಲು
ರಂಪುಗೊಂಡ ನನ್ನ ಅಳುವನ್ನು
ಕೋಪಗೊಂಡ ಅಮ್ಮನ ಬೈಗುಳದಾರ್ಭಟವನ್ನು
ಸಹಿಸಿ ಸಂತೈಸಿ ತನ್ನ ಮಾತನ್ನು ನುಂಗಿ ನಗೆ ಬೀರಿದ್ದು………

ಜಾತ್ರೆ ಯಾತ್ರೆಗಳಲ್ಲಿ
ನನ್ನ ಮಗುವಿಗಾಗಿ ಇದಿರಲಿ ಎಂದು
ಜೋಬು ತಡಕಾಡಿ ಕೊಂಡ ಆಟಿಕೆಯಲ್ಲಿ
ನನ್ನಾಟವ ಕಂಡು  ಜೊತೆಯಾಟವಾಡುತ್ತಾ
ತಾನೂ ಮಗುವಾಗಿದ್ದು….

ಒಂದಷ್ಟು ದೂರದ ನಡೆಗೆ
ನನ್ನ ಕಾಲು ಸೋಲಬಹುದೆಂಬ ಕಾಳಾಜಿಗೆ
ತನ್ನ ತಲೆ ಮೇಲೆ ಕೂರಿಸಿ
ದೇವರೆಂದು ನನ್ನ ಕೊಂಡಾಡಿ
ನನ್ನ ಹೊತ್ತೊಯ್ಯುತ್ತಿದ್ದಿದ್ದು…….

ನನ್ನ ಗದರಿಸಿದ್ದು, ಬೆದರಿಸಿದ್ದು
ತದ ನಂತರ ಸಂಕಟ ಪಟ್ಟು
ನನ್ನ ಮುದ್ದಾಡಿದ್ದು..
ಅಡುಗೆ ಮನೆಯ ಡಬ್ಬಗಳ ತಡಕಾಡಿ
ನನ್ನ ಬಾಯಿಗೆ ಸಿಹಿ ತುರುಕಿ
ಪಟ್ಟ ಸಂಕಟಕ್ಕೊಂದು ಪರಿಹಾರವೆಂಬಂತೆ
ನನ್ನ ಸಿಹಿಯನ್ನೆ ರುಚಿಸಿಕೊಂಡಿದ್ದು…

ನನ್ನಯ ಕುಡಿಗಳ ಆಟ ಪಾಠಗಳು
ಇಂತಹ ಇನ್ನಷ್ಟು,ಬಹಳಷ್ಟನ್ನು
ನೆನಪಿಸುವ ಮಸ್ತಕದಲ್ಲಿ ಮಾಸದೆ
ನಡೆಯಲ್ಲಿ ಅಚ್ಚುಗೊಂಡ
ಅಪ್ಪನೊಂದಿಗಿನ ನನ್ನ ಬಾಲ್ಯ.

ನನ್ನಪ್ಪ ನನ್ನ ದಾರಿದೀಪ
ನನ್ನಯ ಕುಡಿಗಳಿಗೂ ನಾನೆ ಆದರ್ಶ ಎಂಬ ಎಚ್ಚರ
ನಾನು ನನ್ನಪ್ಪನಂತಿರಬೇಕೆಂಬ ಪ್ರಜ್ನೆಯನ್ನು ಅಳಿಯಲು ಬಿಡುತಿಲ್ಲ
ಅಪ್ಪ ಪದಗಳೆ ಇಲ್ಲದ ವರ್ಣನೆ, ಎಣಿಕೆ ಕಾಣದ ಲೆಕ್ಕ
ಈ ಪರಿಯ ಅಪರಿಮಿತ ಅಮಿತತೆಯ ತಿಳಿಯಲು
ನಾನೂ ಅಪ್ಪನಾಗಬೇಕಾಯಿತು.




Sunday, April 5, 2020

ಕಾಣದ ವೈರಾಣು ಕಾಣಿಸಿದ್ದು


ಉಳಿದೆಲ್ಲಾ ಪ್ರಕೃತಿ ವಿಕೋಪ ಗಳಿಗಿಂತಲೂ ಭೀಕರವಾದ ಪರಿಣಾಮಗಳನ್ನು ಮನುಷ್ಯ ಯಕಶ್ಚಿತ್ ಕಣ್ಣಿಗೆ ಕಾಣದ ಕೊರೋನ ವೈರಾಣುವಿನಿಂದಾಗಿ ಅನುಭವಿಸುತ್ತಿದ್ದಾನೆ. ತನ್ನೆಲ್ಲ ಆಡಂಭರ ಸೊಗಸುಗಳಿಗೆ ಕಡಿವಾಣ ಹಾಕಿಕೊಂಡು ಮನೆಯೊಳಗೆ ಬಂದಿಯಾಗಿದ್ದಾನೆ, ಪ್ರತಿ ನಿತ್ಯದ ಸಾವು, ನೋವು, ಸೋಂಕಿತರು ಇಂತಹ ಋಣಾತ್ಮಕತೆಯನ್ನು ಎಣಿಸುವದೆ ದಿನಚರಿಯಾಗಿ ಬಿಟ್ಟಿದೆ. ಮನುಷ್ಯನೆಂಬ ಪ್ರಾಣಿಯ ಚಪಲವೆಂಬುದು ಈ ಮಟ್ಟಿನ ಹೊಡೆತ ನೀಡಿದೆ ಎಂಬುದು ನಾವೆಲ್ಲರೂ ಅರಗಿಸಿಕೊಳ್ಳಲೆ ಬೇಕಾದ ಸತ್ಯ. ಪ್ರಕೃತಿಯ ಮೇಲಿನ ಹಿಡಿತಕ್ಕೆ ಮನುಷ್ಯ ಮುಂದಾದಷ್ಟು ಇಂತಹ ವಿಕೋಪಗಳು ಜರುಗುತ್ತಲೆ ಇರುತ್ತದೆ ಆದರೆ ಮನುಷ್ಯ ಮಾತ್ರ ಬುದ್ದಿ ಕಲಿಯುತ್ತಲೆ ಇಲ್ಲ. ಇದೆ ಕಾರಣಕ್ಕೆ ಮನುಷ್ಯ ಕುಲಕ್ಕೆ ಮಾರಿಯಾದ ಇಂತಹ ಭಾದೆ ಪರೀಕ್ಷೆಗಳನ್ನು ಪ್ರಕೃತಿ ತಂದೊಡ್ಡುತ್ತೆ ತನ್ಮೂಲಕ ತನ್ನ ಸಮತೋಲನವನ್ನು ಕಾಯ್ದುಕೊಳ್ಳು ತ್ತಲೆ  ಎಚ್ಚರಿಕೆಯನ್ನು ರವಾನಿಸುತ್ತಿರುತ್ತದೆ ಮನುಷ್ಯ ಎಚ್ಚರಗೊಂಡಂತೆ ಕಂಡರೂ ಮತ್ತೆ ಮಗದೊಮ್ಮೆ ಮಾಡಿದ ತಪ್ಪನ್ನೆ ಮಾಡಿ ತನಗಾಗಿ ಕೂಪ ತೋಡುತ್ತಿರುತ್ತಾನೆ, ತಾನೆ ಅದರೊಳಗೆ ಸಮಾಧಿಯಾಗುವೆನೆಂದು ಗೊತ್ತಿದ್ದರೂ ಬುದ್ದಿಯ ಪರಿಮಿತಿ ಅಷ್ಟಕಷ್ಟೆ.

ವಿಚಿತ್ರ ನೋಡಿ, ಕೊರೋನಾ ವೈರಾಣುವಿನ COVID-19 ಎನ್ನುವ ಈ ಪ್ರಬೇಧ ಕೊಟ್ಯಾನುಕೋಟಿ ಜೀವ ರಾಶಿ ಹೊಂದಿರುವ ಈ ಭುವಿಯಲ್ಲಿ ಈ ಪರಿಯಲ್ಲಿ ಭಾಧಿಸುತ್ತಿರುವದು ಮನುಷ್ಯನನ್ನು ಮಾತ್ರ. ಅದಕ್ಕಾಗೆ ನಾನು ಈ ವೈರಾಣುವಿನ ಜೊತೆ ಪ್ರಕೃತಿಯ ಎಚ್ಚರ ಎಂಭ ಮಾತನ್ನು ಎಳೆದು ತಂದೆ.ಮನುಷ್ಯನೆಂಬ ಕ್ರೂರಿ ಬಿಲ ಸೇರಿದ್ದೆ ತಡ ಪ್ರಕೃತಿ ನಲಿಯತೊಡಗಿದೆ ಅಂತೆಯೆ ಭುವಿಯಲ್ಲಿನ ಇತರೆ ಜೀವಿ ನೆಮ್ಮದಿಯ ಉಸಿರುಬಿಟ್ಟಿದೆ ಒಟ್ಟಾಗಿ ಹೇಳಬೇಕೆಂದರೆ ಈ ಇಳೆ ನವಿರುಗೊಳ್ಳುತ್ತಿದೆ.  ಹೌದು ನಾವೆಲ್ಲರೂ  ಒಪ್ಪಲೇಬೇಕಾದ , ಬೆರಗಿನಿಂದ ನೋಡಬೇಕಾದ ತನ್ಮೂಲಕ ನಮ್ಮನ್ನು ನಾವೆ ತುಲನೆ ಮಾಡಿಕೊಳ್ಳಲೆ ಬೇಕಾದ ಸತ್ಯವಿದು. ಯಾವ ಪ್ರಾಣಿಗಳು ಅತ್ತ ಕಾಡಲ್ಲೂ ಇರಲಾಗದೆ ನಾಡತ್ತಲೂ ಸುಳಿಯಲಾಗದೆ ಚಡಪಡಿಸುತಿದ್ದವೊ ಅವೆಲ್ಲ ಇವತ್ತು ಸ್ವಚ್ಚಂದವಾಗಿ ಯಾವುದೆ ಭಯ ಶಬ್ದಗಳ ಕಾಟವಿಲ್ಲದೆ ತಿರುಗಾಡುತ್ತಿವೆ, ಮನುಷ್ಯನ ರಹದಾರಿಯೆಂಬ ರಸ್ತೆಗಳಲ್ಲು ನಿರ್ಭಯವಾಗಿ ಓಡಾಡುತ್ತಿವೆ.ಇಲ್ಲಿ ಗಮನಿಸಲೇ ಬೇಕಾದ ಇನ್ನೊಂದು ಅಂಶ ವೆಂದರೆ ಮನುಷ್ಯ ನಿರ್ಬೀತತೆಯಿಂದಿದ್ದಾಗ ಕಾಡುಪ್ರಾಣಿಗಳ ಹಾವಳಿ ಇತ್ಯಾದಿ ನ್ಯೂಸ್ ಗಳನ್ನು ಕೇಳುತ್ತಲೆ ಇದ್ದೆವು ಆದರೆ ಈಗ ಕಾಡಿನಿಂದ ನಾಡಿಗೆ ಕಾಲಿಡುವ ಪ್ರಮೇಯವೆ ಅವಕ್ಕಿಲ್ಲ ಕಾರಣ ಅವುಗಳ ಜಾಗದ ಅತಿಕ್ರಮಿಸುವ,, ತಂಟೆಗೈಯುವ ಜನ ಮಂದಿ ಮನೆಯೆಂಬ ಬಿಲ ಸೇರಿದ್ದಾನೆ. ಈಜಿಪ್ಟ್ ನ ವಿಮಾನ ನಿಲ್ದಾಣದ ರನ್ ವೇಗಳಲ್ಲಿ ಬಾತುಕೋಳಿಗಳು ಓಡಾಡುತ್ತಿವೆ. ಇಟಲಿಯ ಸಾರ್ಡಿನಿಯಾ ಕಾಲುವೆಗಳಲ್ಲಿ ಡಾಲ್ಲಿನ್ಗಳು ನರ್ತಿಸುತ್ತಿವೆ.ನೆನಪಿರಲಿ ಡಾಲ್ಪಿನ್ಗಳು ಸ್ವಚ್ಚಂದ ಶುದ್ದವಾದ ನೀರಲ್ಲಷ್ಟೆ ಕಾಣಿಸಿಕೊಳ್ಳುತ್ತದೆ. ಸದಾ ಪ್ರವಾಸಿಗರಿಂದಲೆ ತುಂಬಿ ತುಳುಕುತಿದ್ದ ಸಿಂಗಾಪುರದ ಕಡಲಂಚುಗಲ್ಲಿ ಮನುಷ್ಯ ಸಂಚಾರ ಸ್ತಬ್ದತೆಯಿಂದಾಗಿ ನೀರು ನಾಯಿಗಳು ಕಾಣಿಸಿಕೊಳ್ಳುತ್ತಿದೆ.ತನ್ನ ಮೂಲಸ್ಥಾನಕ್ಕೆ ಮರಳಿದುದರ ನೆಮ್ಮದಿ ಅವಕ್ಕಿರಬಹುದು ಅಲ್ಲವೆ. ಮರೆಯಾಗುತ್ತಿದ್ದ ರಾಜಹಂಸಗಳು ಮತ್ತೆ ಕಾಣಿಸಿಕೊಳ್ಳುತ್ತಿವೆ.ಎಲ್ಲವೂ ಶುಭ ಸೂಚನೆಗಳೆ ಆದರೆ ಮನುಷ್ಯನಿಗಷ್ಟೆ ಹೆಮ್ಮಾರಿ

ನಾಸದ ವರದಿಯೊಂದರ ಪ್ರಕಾರ ಬರೋಬ್ಬರಿ 2 ತಿಂಗಳಿಂದಲೂ ಹೆಚ್ಚಿನ ಲಾಕ್ ಡೌನ್ ಕಾರಣದಿಂದ ಸದಾ ಮಬ್ಬು ಹೊಗೆಯಿಂದ ಕೂಡಿದ್ದ ಚೀನಾದ ಆಗಸಗಳು ತಿಳಿ ನೀಲವಾಗುತ್ತಿದೆ ಅಂದರೆ ವಾತಾವರಣದಲ್ಲಿನ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣ ತಗ್ಗಿ ಶುಚಿಗೊಳ್ಳುತ್ತಿದೆ. ವಾಶಿಂಗ್ಟನ್ ಪೋಷ್ಟ್ ವರದಿಯ ಪ್ರಕಾರ ಉತ್ತರ ಇಟೆಲಿಯ ವಾಯು ಮಾಲಿನ್ಯವೂ ಗಣನೀಯ ಪ್ರಮಾಣದಲ್ಲಿ ಸುಮಾರು 70 ಪ್ರತಿಶತದಷ್ಟು ಕಡಿಮೆಯಾಗಿದೆ. ಈ ಪರಿಯ ವಾತಾವರಣದ ಕಲುಷಿತೆಯೂ ವಿಶ್ವದೆಲ್ಲೆಡೆ ತಿಳಿಗೊಳ್ಳುತ್ತಿದೆ ಪರಿಣಾಮ ವಿಶ್ವದ ತಾಪಮಾನ  ಗ್ಲೋಬಲ್ ವಾರ್ಮಿಂಗ್ ಸಮಸ್ಯೆಯ ಬಗ್ಗೆ ಇಷ್ಟು ದಿನ ಬಡುಕೊಳ್ಳುತಿದ್ದವೊ ಅದೀಗ ಸಹಜತೆಯತ್ತ ಮುಖ ಮಾಡಿದೆ. ಉಳಿದವುಗಳೇಕೆ ವಾಯುಮಾಲಿನ್ಯದಿಂದ ಜರ್ಜರಿತವಾಗಿದ್ದ ನಮ್ಮದೆ ದೇಶದ ರಾಜಧಾನಿ ದಿಲ್ಲಿಯಲ್ಲೀಗ ವಾತಾವರಣ ಸಹಜತೆಯತ್ತ ಮರಳುತ್ತಿದೆ. ಕಾರ್ಖಾನೆಗಳು ಬಂದ್ ಆಗಿವೆ, ಕಸಾಯಿಕಖಾನೆಗಳಲ್ಲಿನ  ಪ್ರಾಣಿ ವಧೆ ಕಡಿಮೆಯಾಗಿ ಅವುಗಳಿಂದಾಗುವ ಕೊಚ್ಚೆ ತಹಬಂದಿಗೆ ಬಂದಿದೆ, ಇವೆಲ್ಲವಿಂದಲೂ ನದಿ ನೀರಿನ ಸೆಲೆಗಳಿಗೆ ಸೇರುತಿದ್ದ ತಾಜ್ಯಗಳು ಇಲ್ಲವಾಗಿದೆ ಪರಿಣಾಮ ಇಟೆಲಿಯ ವೆನಿಸ್ ಕಾಲುವೆಗಳಿಂದ ಹಿಡಿದು ನಮ್ಮ ದೇಶದ ದೊಡ್ಡ ದೊಡ್ಡ ನದಿಗಳು ತನ್ನಿಂದ ತಾನೆ ತನ್ನೊಳಗಿರುವ ಮೀನುಗಳ ಓಡಾಟವನ್ನು, ತನ್ನ ಪ್ರತಿಬಿಂಬವನ್ನು ಸ್ಟಷ್ಟವಾಗಿ ತೋರಿಸುವ ಮಟ್ಟಿಗೆ ಸ್ವಚ್ಚಗೊಳ್ಳುತ್ತಿದೆ. ವಾಹನಗಳು, ಕಾರ್ಖಾನೆಯ ದೈತ ಚಿಮಿಣಿಗಳು ಎಲ್ಲವೂ ಬಂದ್…. ಬಂದ್…. ಪರಿಣಾಮ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಪ್ರಮಾಣ ಹಿಂದಿನ 20 ವರುಷಗಳಲ್ಲಿ ಕಂಡರಿಯದ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಕೋರೋನ ವೈರಾಣುವಿನ ಪ್ರಭಾವವನ್ನು ಮಗದೊಂದು ಮಗ್ಗುಲಿನಿಂದ ನೋಡಬಹುದಾದ ಚಿತ್ರವಿದು.

ಮನುಷ್ಯ ತಾನೆ ಶ್ರೇಷ್ಠವೆಂದು ಬೀಗುತ್ತಿರಬೇಕಾದರೆನೆ ಪ್ರಕೃತಿ ಎದುರಿಟ್ಟ ವೈಚಿತ್ರವಿದು. ತಾನೆಷ್ಟು ನಿಕೃಷ್ಟ, ತನ್ನ ಯೋಜನೆಗಳು ತನ್ನ ಕಾರ್ಯಗಳೆಷ್ಟು ಪ್ರಕೃತಿ ನಿಯಮಗಳಿಗೆ ಬಾಹಿರವಾದದ್ದು. ತಾನೆಲ್ಲ ಜಯಿಸಿಬಿಡಬಲ್ಲೆ, ಪ್ರಕೃತಿ ರಹಸ್ಯಗಳನ್ನು ತಿಳಿದು ಬಿಡಬಲ್ಲೆ ಎಂಬ ದುಡುಕುತನದ ಓಟದ ಓಗದಲ್ಲಿ ನಾ ಮರೆತಿದ್ದು ಏನನ್ನ? ತನ್ನ ಇತಿ ಮಿತಿಗಳೇನು? ಪ್ರಕೃತಿಯಲ್ಲಿ ನಾನಿರಬೇಕಾದ ಪರಿಮಿತಿಗಳೇನು?ನಾ ಏನನ್ನ ಎಷ್ಟನ್ನ ಆಹಾರಕ್ಕಾಗಿ ಬಳಸಿಕೊಳ್ಳಬೇಕು?ಇಂತಹ್ದ್ದೆ ಹತ್ತಾರು ಪ್ರಶ್ನೆಗಳಿಗೆ ಉತ್ತ ಕಂಡುಕೊಳ್ಳಬೇಕಾದ ಜರೂರಿ ಮನುಷ್ಯ ಸಂಕುಲಕ್ಕಿದೆ. ಕೊರೋನ ದಿಂದ ನಾವೆಲ್ಲರೂ ಪಾರಾಗುತ್ತೇವೆ, ಮುಂದಕ್ಕೆ ಲಸಿಕೆಯೂ ಸಿಗುತ್ತೆ ಇಂತಹ ಹಲವು ವೈರಾಣುಗಳನ್ನು ಮನುಷ್ಯ ಎದುರಿಸಿಯೂ ಇದ್ದಾನೆ ಆದರೆ ನಾವು ಪದೆ ಪದೆ ಎಡವುತ್ತಿರುವುದು ಯಾಕೆ ಎನ್ನುವದನ್ನು ತಿಳಿಯದೆ ಹೋದರೆ,ಪ್ರಕೃತಿಯ ಮೇಲಿನ ಸವಾರಿ ಯನ್ನು ನಾವು ನಿಲ್ಲಿಸದೆ ಹೋದರೆ ಇಂತಹ ಬಗೆ ಬಗೆಯ ವೈರಾಣು ಗಳು ನಮ್ಮೆದುರು ಬಂದು ನಿಂತು ಹೆಮ್ಮಾರಿಯಂತೆ ಕಾಡುತ್ತವೆ, ಮನುಷ್ಯ ಸಂಕುಲದ ಜೀವ ಹಿಂಡುತ್ತದೆ ಅನ್ನುವದು ಶತಸಿದ್ದ. ಬಹುಶಃ ಈ ನಿಟ್ಟಿನಲ್ಲಿ ಯೋಚಿಸುವದು COVID-19 ಗೆ ಲಸಿಕೆ ಕಂಡುಹಿಡಿಯುವಷ್ಟೆ ಅಗತ್ಯ ವಿಷಯವಾಗ ಬೇಕಿದೆ ನಮಗೆ.

ಮನೆಯಲ್ಲಿರೋಣ, ಕ್ಷೇಮವಾಗಿರೋಣ, ಪರಿಸರವ ಉನ್ನತೀಕರಿಸೋಣ
ನಿಮ್ಮವ…
ರಾಘವೇಂದ್ರ ತೆಕ್ಕಾರ್

Wednesday, January 25, 2017

ರೆಕ್ಕೆಗೆ ರಕ್ತ ಮೆತ್ತಿಸಿಕೊಂಡ ಹದ್ದು -ಸ್ವಸ್ಥ !!! ಮೆದುಳಿನ ಹುಡುಕಾಟ

ಸ್ವಸ್ಥ !!! ಮೆದುಳಿನ ಹುಡುಕಾಟದಲ್ಲಿ
ರಾಶಿ ಪೂರ ಕಾಲಿಗಡರಿಕೊಂಡಿದೆ
ಈಗ ಅಷ್ಟಿಷ್ಟಲ್ಲ ಬದಲಾಗಿ ಎಷ್ಟೆಷ್ಟೊ
ಗೊಬ್ಬರಕ್ಕೂ ಯೋಗ್ಯವಾಗದೆ ಅನಾಥವಾಗಿದೆ
ಬಿದ್ದಲ್ಲೆ ಬಿದ್ದು ಬೆತ್ತಲಾಗಿದೆ.
ಅರೆ ಜೀವ ಮೆದುಳುಗಳು ಮಾತಾಡುತ್ತಿವೆ
ಬಹು ದೊಡ್ಡ ಆಸೆಯೊಂದು ಹುಟ್ಟುತ್ತಲೆ ಸತ್ತಿದೆ
ಇದರರಿವಿಲ್ಲದೆ,ದೊಣ್ಣೆ ನಾಯಕ ಸಲಹುತ್ತಾನೆ
ಛಟಪಟನೆ ಛಿದ್ರವಾದ ತನ್ನದೆ ಅವಯವಗಳ
ಹುಡುಕಿ ತರುತ್ತಾನೆ….ಇಂತಿರುವಾಗ ಜೀವಕ್ಕೇನೂ ತೊಂದರೆ?
ನರ ಮಂಡಲ ಛೇದಿಸಿಕೊಂಡ ಮೆದುಳುಗಳವು
ಜಿನುಗಿದ ರಕ್ತ ಹಾಗು ಬಿದ್ದಲ್ಲೆ ಧೂಳು ಮೆತ್ತಿಸಿಕೊಂಡವವು
ಗಿಡುಗನ ರೆಕ್ಕೆಯ ನೆರಳನ್ನೆ ಸಲಹೆ ಎಂದುಕೊಂಡವವು
ನೆರಳಿನ ಬಣ್ಣವ…ಕುಕ್ಕಿದಾಗಲೆ ಅರಿಯ ಬಹುದೇನೊ ?
ಜಯ ಜಯ …ಜಯ ಜಯ ಎಂಬೊ
ಭೋ ಪರಾಕಿನ ಮೆರವಣಿಗೆ
ಸುಳ್ಳು, ದಗಾ, ಮೋಸ, ಕ್ರೌರ್ಯ
ಅಪಹಾಸ್ಯ ,ಕಪಟತನ, ಎಂಬಿತ್ಯಾದಿ
ಸಕಲ ಗುಣೋತ್ಪತ್ತಿಯ ಗಣ
ಇರುವೆಗಳ ಸಾಲು- ಬಿದ್ದ ಮೆದುಳನ್ನಾವರಿಸಿದೆ
ಇದೀಗ ಇರುವೆಗಳಿಗೆ ಅರೆ ಜೀವದವು ಆಹಾರ
ಸ್ವಸ್ಥ ವೆನಿಸಿಕೊಂಡವಕ್ಕೆ ಕೊಂಚ ಕೊಂಚವೆ ವಿಷ ಪೂರಣ.
ಇಂಚಿಂಚೆ ಕರಗುತ್ತಿರುವ ಮೆದುಳು
ವಟರಗುಟ್ಟುತ್ತಲೆ ಬದುಕ ಮುಗಿಸುತ್ತಿದೆ
ಖೂಳರ ಕೈಗಳೊಳಗೆ ಬೆತ್ತಲಾದವು
ಕಣ್ಣು ಕಳೆದು ಕುರುಡಾದವು
ಬೋಪರಾಕುಗಳಲ್ಲೆ ಕಾಲ ಕಳೆದವು
ಒಂದಿಲ್ಲೊಂದು ದಿನ ಮೋಡಿಗೆ ಸಿಲುಕಿ
ಇರುವೆಗಳಾಗಿದ್ದವವು.
ಇಂದು.....
ಮಾರಾಟಕ್ಕೂ ಯೋಗ್ಯವಲ್ಲದ ಮೆದುಳನ್ನು
ಬೇರುಪಾಯವಿಲ್ಲದೆ ಮಣ್ಣು ಮಣ್ಣಾಗಿಸಿಕೊಳ್ಳುತ್ತಿದೆ
ಮೆದುಳ ರಾಶಿಗೆ ಸಮೂಹ ಸನ್ನಿ ಹಿಡಿಸಿದಾತ
ನೆರಳಾಗಬೇಕಾದವನಾತನ ವಿಳಾಸ ತಪ್ಪಿದೆ
ದೊಣ್ಣೆ ನಾಯಕನ ಪತ್ತೆಗಾಗಿನ ಹುಡುಕಾಟದಲ್ಲಿ
ಅದೆ ಇರುವೆಗಳ ಮೆರವಣಿಗೆಯ ಜೊತೆ
ದೂರದೂರಿನಲ್ಲಾತ ಮತ್ತಷ್ಟು ಸ್ವಸ್ಥ ಮೆದುಳಗಳ
ಖರೀದಿಗೆ ತೊಡಗಿರುವ ಸುದ್ದಿ ಇದೆ.
ಮಾತಿನ ಮೋಡಿಯೊಳಗೆ ಮತ್ತಷ್ಟು
ಮೆದುಳುಗಳು ಬೆತ್ತಲಾಗುತ್ತಲೆ ಜೊತೆಗೂಡುತ್ತಿದೆ
ರೆಕ್ಕೆಗೆ ರಕ್ತ ಮೆತ್ತಿಸಿಕೊಂಡ ಹದ್ದುಗಳಿಗೀಗ ಸುಗ್ಗಿಯ ಕಾಲ.

Monday, January 2, 2017

ಹೆಜ್ಜೆಗುರುತು


ನಡೆಯ ಅರ್ಥ ನಾ ಹುಡುಕುವದಿಲ್ಲ
ನಿಮ್ಮಯ ಪ್ರತಿ ಹೆಜ್ಜೆಗಳು
ನನ್ನೊಳಗಿನ ದರ್ಪಣ
ಮೈ ಜಡ್ಡು ನನ್ನೊಳಗಿನ ಮಬ್ಬನ್ನ ನೋಡುತ್ತಿರುವೆ
ಅದಕ್ಕಾಗಿ ನಾ ವ್ಯಯಿಸುವದೇನಿಲ್ಲ

ಸೋತ ಕಾಲಿನ ಇಂಬು
ಅವಮಾನಗಳ ಸಹನೆ
ಹೊಸ ಜೀವನದ ಮುನ್ನುಡಿ ಎಂಬ ಕ್ಲೀಷೆ
ಎಲ್ಲವೂ ನಿಮ್ಮ ಹೆಜ್ಜೆ ಮೇಲೊಂದಿನ ಹೆಜ್ಜೆ
ಪ್ರತಿ ನಡೆಯು ನನ್ನದೆ ಹಿಡಿಯಾದ ಜೀವ

ಎಂದೊ ಬರಡಾಗಿದ್ದ ಈ ಮನವು
ನಿಮ್ಮಗಳ ಹೆಜ್ಜೆ ಮೇಲೆ ಟಿಸಿಲೊಡೆದಿದೆ
ಪ್ರತಿ ಹೆಜ್ಜೆಯಲ್ಲು ಒಂದೊಂದು ನೆನಪು
ನೆನೆಯಲು ಕಾರಣಗಳೆ ಅಲ್ಲದ ಹಲವು ಕಾರಣ
ಹೆಜ್ಜೆಗಳನ್ನು ಜೋಪಾನಗೊಳಿಸಬೇಕೆಂಬ ಬಯಕೆ.

ಅಚ್ಚೊತ್ತಿ ಫ್ರೇಮ್ ನೊಳಗೆ ಬಂಧಿಸಿ
ಗೋಡೆಗೆ ಮೊಳೆ ಹೊಡೆದು ನಿಮ್ಮ ಕೂಡಿಡಲಾರೆ
ದೂರ ನಡೆಯೋಣ ಬಹಳಷ್ಟು
ನಿಮ್ಮ ಪ್ರತಿ ಹೆಜ್ಜೆಗಳ ಮೇಲೆ ನನ್ನ ಕನಸುಗಳ ಪೋಣಿಸಿ
ಜೊತೆಯಾಗಿ ನಾನು ನಡೆದುಬಿಡುತ್ತೇನೆ
ಅದಕ್ಕಾಗಿ ನಾ ವ್ಯಯಿಸುವದೇನಿಲ್ಲ
ನಡೆಯೆಂಬ ಬದುಕಿನರ್ಥಕ್ಕೆ ಹುಡುಕಾಟವಿಲ್ಲ.

ಬದುಕೆಂದರೆ ನೀವು ನಾನು
ನಮ್ಮಗಳ ಹೆಜ್ಜೆಗುರುತು.

Tuesday, July 7, 2015

ವಿದ್ಯೆ ಮತ್ತು ಸಹೃದಯಿಗರು



                                                 “ಇದು ಸುಮಾರು 2002 ನೆ ಇಸವಿಯ ಘಟನೆಗಳು……
ಬಹುರಾಷ್ಟ್ರೀಯ ಕಂಪೆನಿಯೊಂದು ತನ್ನ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸಂದರ್ಶನವೊಂದನ್ನು ನಗರದ ಪ್ರತಿಷ್ಟಿತ ಹೋಟೇಲ್ ಒಂದರಲ್ಲಿ ಕರೆದಿತ್ತು. ಸೂಟು ಬೂಟಲ್ಲಿ ಖಡಕ್ ಇಸ್ತರೀ ಬಟ್ಟೆಗಳ ಮೇಳೈಕೆಗಳ ಜೊತೆ ಕೈಯಲ್ಲಿ ಒಂದೀಟುದ್ದದ ಫೈಲ್ ಹಿಡಿದು ಇದ್ದ ಬದ್ದ ಕಾಗದ ಪತ್ರವನ್ನು ತುಂಬಿ ಸರತಿಯಲ್ಲಿ ಸಂದರ್ಶನವನ್ನು ಎದುರುಗೊಳ್ಳಲು ತಲೆ ಮೇಲೆ ಆಕಾಶ ಉದುರಿಸಿಕೊಂಡಂತೆ ನಿಂತವರ ಮಧ್ಯದಲ್ಲಿ…….. ಕಾಲಿಗೆ ಪ್ಯಾರಗಾನ್ ಹವಾಯಿ ಚಪ್ಪಲ್ ಸಿಗಿಸಿಕೊಂಡು ದೊಗಲೆ ಪ್ಯಾಂಟ್ ಜೋಬಲ್ಲಿ ಒಂದು ಪೆನ್ ಕೈಯಲ್ಲಿ ಸುರುಳಿ ಸುತ್ತಿಟ್ಟುಕೊಂಡ ಸಿ ವಿ ಜೊತೆ ಆತ ಕೂಡ ಇತರರ ಕಣ್ಣಿಗೆ ರಾಚುವ ಮಿಕದಂತೆ ನಿಂತಿದ್ದ. ಇತರರೀಗೆ ಆತ ನಗು ತರಿಸುವ ವಸ್ತು.

ಹೀಗೆ ಸರತಿಯಲ್ಲಿ ನಿಂತವ ಸುಖಾ ಸುಮ್ಮನೆ ನಗು ತರಿಸುವವನಾದರು ಆತನ ಪರಿಸ್ಥಿತಿ ಆತನನ್ನು ಆ ತೆರನಾಗಿ ನಿಲ್ಲಿಸಿ ಇತರರನ್ನು ನಗಿಸಿತ್ತು. ಹೇಳಬೇಕೆಂದರೆ ಆತ ಸುಮಾರು 52 ಕಿಮಿ ದೂರದಿಂದ ಅಲ್ಲಿಗೆ ಉದ್ಯೋಗ ಆಕಾಂಕ್ಷಿಯಾಗಿ ಬಂದಿದ್ದ.ಇರುವ ನೂರು ರುಪಾಯಿಯಲ್ಲಿ 48 ರುಪಾಯಿಯ ಹವಾಯಿ ಚಪ್ಪಲ್ ಖರೀದಿಸಿದ್ದ.ಉಳಿದ ಹಣವನ್ನು ಬಸ್ ಖರ್ಚುಗಾಗಿ ಹೊಂದಿಸಲು 12 ಕೀಮಿ ನಡೆದೆ ಸಾಗಿದ್ದ.ಅದು ಬರಿದೆ ಕಾಲಲ್ಲಿ. ತದ ನಂತರವಷ್ಟೆ ಕಾಲಿಗೊಂದು ಬೆಲೆಬಾಳುವ ( ಅವನ ದೃಷ್ಟಿಯಲ್ಲಿ) ಚಪ್ಪಲ್ ಖರೀದಿಸಿ ಬಸ್ಸೇರಿ ಮೇಲೆ ವಿವರಿಸಿದ ಸರತಿಯಲ್ಲಿ ಬಂದು ನಿಂತಿದ್ದ.ಬೆಳಿಗ್ಗೆ ಒಂದಿಷ್ಟು ತಂಗಳನ್ನ ಹೊಟ್ಟೆ ಸೇರಿತ್ತು. ಸರತಿ ಬೇಗ ಮುಗಿದರೆ ಮತ್ತರಡು ಘಂಟೆಯಲ್ಲಿ ಊಟ ಸಿಗಲು ಬಹುದೇನೊ? ಕಾರಣ ಊಟಕ್ಕೆ ಆತನಲ್ಲಿ ಕಾಸಿಲ್ಲ! ಮತ್ತೆ ಮನೆ ತಲುಪಿದರಷ್ಟೆ ಹಿಟ್ಟು, ಇರೊ ಕಾಸು ಮುಗಿದಲ್ಲಿ ಬಿಟ್ಟಿ ಕರೆದೊಯ್ಯಲು ಬಸ್ ನಿರ್ವಾಹಕ ಆತನ ಮಾವನೆ? ಇಲ್ಲ ಊಟ ಮಾಡುವಂತಿಲ್ಲ. ನೆತ್ತಿ ಸುಡುವ ಬಿಸಿಲಲ್ಲಿ ಎದುರಿಗಿದ್ದವನನ್ನು ಟೈಮ್ ಏನು? ಎಂದು ವಿಚಾರಿಸಲು ಆತನನ್ನು ಅಡಿಯಿಂದ ಮುಡಿಯವರೆಗೆ ನೋಡಿದ ಆ ವ್ಯಕ್ತಿ ವೇಳೆ ತಿಳಿಸಬಹುದಾದ ಪ್ರಾಣಿಯೆಂದು ಮನದಟ್ಟು ಮಾಡಿಕೊಂಡು ಹೇಳಿದ್ದು .. ಮಧ್ಯಾಹ್ನ 12.30.ಬಹುಶಃ ಆ ವ್ಯಕ್ತಿಯ ನೆತ್ತಿ ಸುಡುತ್ತಿರಬೇಕು ಬಿಸಿಲಿಂದ ಮಾತ್ರವಲ್ಲ ಆತನ ಸನಿಹದಿಂದಲೂ ಕೂಡ. ಸರತಿ ಬಲು ನಿಧಾನಕ್ಕೆ ಸಾಗುತಿತ್ತು.

ಸಂದರ್ಶಕರು ಊಟಕ್ಕೆ ಹೋಗಿದ್ದಾರಂತೆ ಎಂದು ಕೋಣೆಯಿಂದ ಹೊರ ಬಂದ ವ್ಯಕ್ತಿಯೊಬ್ಬ ನುಡಿಯಲು ಸರತಿ ಸಾಲು ಒಂದಷ್ಟು ಊಟದ ನೆಪದಲ್ಲಿ ಕರಗಿತ್ತು. ಆತನೀಗ ಕರಗಿದ ಸರತಿಯ ಲಾಭ ಪಡೆದು ಮುಂದುವರಿಯುತ್ತಾನೆ ಕೋಣೆಯ ಬಾಗಿಲಿನ ತನಕ, ಅಷ್ಟರ ಮಟ್ಟಿಗೆ ಊಟ ಕೆಡಿಸಿಕೊಂಡಿದ್ದು ಸಾರ್ಥಕ.ಸುಡು ಬಿಸಿಲನ್ನು ತಪ್ಪಿಸಿಕೊಂಡ ಧನ್ಯತೆ. ಒಂದರ್ಧ ಗಂಟೆಯಾಗಿರಬೇಕು ಕೋಣೆಯ ಬಾಗಿಲು ತೆರೆದಿತ್ತು ದ್ವಾರದಲ್ಲೆ ಎದುರುಗೊಂಡವನೊಬ್ಬ… ಏನಪ್ಪ ಇಂಟರ್ವೂಗೆ ಬಂದ್ಯಾ, ಏನು ವೇಷ ನಿಂದು, ಹಿಂಗೆ ಬರ್ತಾರೇನು? ಎಂದೇನೊ ಗದರಿಸಿ ಒಳ ನಡೆ ಎಂದಿದ್ದ ಆತ ಕಮಕ್ ಕಿಮಕ್ ಎನ್ನದೆ ಕೋಣೆಗೆ ಪ್ರವೇಶಿಸಿದ್ದ.ಮುಂದೇನೊ ಎಂಬ ಚಿಂತೆ ಆತನಲ್ಲಿ ಇದ್ದಂತಿರಲಿಲ್ಲ.

ಮೂರು ಜನರ ಸಂದರ್ಶಕರ ತಂಡವೊಂದು ಬೆಂಗಳೂರಿನಿಂದ ಆ ನಗರಕ್ಕೆ ಬಂದಿತ್ತು. ಮೂವರ ತಂಡದಲ್ಲಿದ್ದಿದ್ದು ಒಬ್ಬರೆ ಕನ್ನಡಿಗ, ಇನ್ನೊಬ್ಬರು ಮಳೆಯಾಳಿ ಭಾಷಿಕನಾದರೆ ಮಗದೊಬ್ಬರು ಹಿಂದಿ ಭಾಷಿಕರು. ಈ ಮೂವರೀಗೂ ಇಂಗ್ಲೀಷ್ ಭಾಷೆ ಸುಲಲಿತವಾಗಿ ಬರುತಿತ್ತು ಹಾಗೂ ಹಾಲಿ ಸಂದರ್ಶನವೂ ಕೂಡ ಅಲ್ಲಿವರೆಗೆ ನಡೆದಿದ್ದು ಅದೆ ಭಾಷೆಯಲ್ಲಿ.ಇಂತಿಪ್ಪ ಪರಿಸರದ ಕೋಣೆಯೊಳಗೆ ಕೆದರಿದ ಕೂದಲನ್ನು ಸವರುತ್ತ ವಿಚಿತ್ರ ವೇಷಿಗನಾದ ಆತ ಒಳ ಬರಬಹುದೆ ಎಂದು ಕೇಳಿ ಅಪ್ಪಣೆಗಾಗಿ ಕಾಯುತಿದ್ದ.ಸಂದರ್ಶಕರಲ್ಲೊಬ್ಬ ಬಂದು ಕುಕ್ಕರಿಸು ಎಂದು ಏನೊ ಸನ್ನೆ ಮಾಡಲು ಆತ ಅವರುಗಳ ಮುಂದೆ ಇಟ್ಟಿದ್ದ ಆಸನದಲ್ಲಿ ಆಸೀನನಾಗಿದ್ದ. ಸಂದರ್ಶಕ ಹೆಸರು ಇತ್ಯಾದಿಗಳನ್ನು ಪರಿಚಯಿಸಿಕೊಂಡು (ಪರಿಚಯಿಸಿಕೊಂಡಂತೆ) ಮುಂದುವರಿದು ಪ್ರಶ್ನೆಗಳನ್ನು ಕೇಳಲು ಶುರುವಿಟ್ಟುಕೊಂಡ…. ಆತನೀಗೆ ಪಚೀತಿ ಶುರುವಾಗಿದ್ದು ಇಲ್ಲಿಯೆ. ಉತ್ತರ ಗೊತ್ತಿದ್ದರು ಉತ್ತರಿಸಲಾಗದ ಭಾಷೆ ಸಮಸ್ಯೆ. ಆತನೇನೊ ಕನ್ನಡದಲ್ಲಿ ಉತ್ತರಿಸುತಿದ್ದ ಆದರೆ ಅವರಿಗೆ ಇಂಗ್ಲೀಷ್ ಭಾಷೆಯಲ್ಲೆ ಉತ್ತರ ಬೇಕಾಗಿತ್ತು (ಕನ್ನಡಿಗ ಸಂದರ್ಶಕನನ್ನು ಸೇರಿ.), ಅದದ್ದಾಗಲಿ ಎಂದು ಕನ್ನಡದಲ್ಲೆ ಶುರುವಿಟ್ಟುಕೊಂಡ ಆತ ಸಾದ್ಯಂತವಾಗಿ ಥಿಯರಿ ಪ್ರಾಕ್ಟಿಕಲ್ ಪ್ರಾಬ್ಲೆಂಮ್ಸ್ ಒಳಗೂಡಿ ವಿಷಯದ ಹಿಂದೆ ಮುಂದೆ ಎಡ ಬಲ ಎಲ್ಲವನ್ನು ವಿವರಿಸಲು ಕನ್ನಡಿಗ ಅದನ್ನೆ ಟ್ರಾನ್ಸ್ಲೇಟ್ ಮಾಡಿ ಇತರರೀಗೆ ಅರುಹಲು ಆತನಲ್ಲಿ ಆತನ ವೇಷಕ್ಕೂ ಮಿಗಿಲಾದ ಬಂಡವಾಳವಿದೆ ಎಂದು ಸಂದರ್ಶಕರೀಗೆ ಮನದಟ್ಟಾಗಿತ್ತು.ಬಟ್…….ಭಾಷೆ ಮುಂದಿನ ಕೆಲಸದ ಬಹು ದೊಡ್ಡ ತೊಡಕು ಎಂದು ಭಾವಿಸಿದ ಆ ಮಂದಿ ಹಾಗೆಯೆ ಇವನಲ್ಲಿ ಹೇಳಲು ಅವಕಾಶವೊಂದು ದೊರೆತರೆ ಭಾಷೆಯೇನು ಅದಕ್ಕಿಂತ ಮಿಗಿಲಾದದ್ದನ್ನು ಸಾಧಿಸಬಲ್ಲೆ ಎಂಬ ಧೃಢ ವಿಶ್ವಾಸದ ಮಾತನ್ನಾಡಿದ್ದ.ಭರವಸೆ ಮೂಡಿಸಲೆಂಬಂತೆ ಕೆಲಸ ಸಿಕ್ಕಿದಲ್ಲಿ ತಾನು ನಿರ್ವಹಿಸುವ, ಕೆಲಸದಲ್ಲಿ ಒದಗಿ ಬರಬಹುದಾದ ಸಮಸ್ಯೆಗಳ ಪಟ್ಟಿ ಹಾಗು ಅದರ ನಿವಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ 2 ಪುಟದ ಸಂಕ್ಷಿಪ್ತ ಪಟ್ಟಿಯನ್ನು ಕುಳಿತಲ್ಲೆ ಬರೆದು ಕೈಗಿರಿಸಿದ್ದ. ಸಂದರ್ಶಕರ ಹುಬ್ಬೇರಿತ್ತು. ಆತನ ವಿವರಗಳನ್ನು ಪಡೆದ ಸಂದರ್ಶಕ ತಂಡ ಮುಂದೆ ತಿಳಿಸಲಾಗುವದು ಎನ್ನಲು ಆತ ಎದ್ದು ಹೊರ ಬಂದಿದ್ದ. ಹೊರಬರುತ್ತಾ ಕಿವಿಗೆ ಬಿದ್ದ ಸಂದರ್ಶಕರ ಮಾತು ಏನೆಂದರೆ “ ತುಂಬಾ ಕುತೂಹಲಭರಿತ, ತಿಳಿದ, ಪರಿಪೂರ್ಣ, ಅಶಿಸ್ತು, ವ್ಯಕ್ತಿ” ಎಂಬರ್ಥ ಬರುವ ಇಂಗ್ಲೀಷ್ ವಾಕ್ಯಗಳು.

ಬರೋಬ್ಬರಿ ಒಂದು ಘಂಟೆಯ ಸಂದರ್ಶನವಾಗಿತ್ತು ಆತನದು. ಕುತೂಹಲಕ್ಕೆಂದು ಪ್ರಶ್ನೆಗೆ ಮೊದಲ್ಗೊಂಡ ಸಂದರ್ಶಕರು ಆತನ ಸಂದರ್ಶನದಲ್ಲಿ ವೇಳೆ ಸರಿದದ್ದೆ ತಿಳಿಯದೆ ಕೊನೆಗೆ ಏನೊಂದು ತಿಳಿಸದೆ ಹುಬ್ಬೇರಿಸಿಕೊಂಡು ಅಡ್ಡ ಗೋಡೆ ಮೇಲೆ ದೀಪವಿಟ್ಟಿದ್ದರು.ಇನ್ನೂ ಕೋಣೆ ಪ್ರವೇಶಕ್ಕೆ ಕಾಯುತಿದ್ದವರ ದೃಷ್ಟಿ ಹೊರಬಂದ ಆತನ ಮೇಲೆ … ಅವರ ದೃಷ್ಟಿ.ಒಳ ಹೋಗಬೇಕಾದರೆ ಇದ್ದದಕ್ಕೂ ಈಗಿರುವದಕ್ಕೂ ವ್ಯತ್ಯಾಸವಿತ್ತು, ಅವರ ಕಣ್ಣುಗಳಲ್ಲಿ ಕುತೂಹಲವಿತ್ತು. ಆತನೊಳಗಿನ ಹಸಿವು ಅವನ್ನೆಲ್ಲ ಗ್ರಹಿಸಿದರೂ ಗ್ರಹಿಸದಂತೆ ಮಾಡಿತ್ತು. ಹೋಟೆಲ್ ಕಂಪೌಂಡ್ ದಾಟಿ ಬಂದ ಆತ ತೆರದ ನಲ್ಲಿಯಲ್ಲಿ ಬೊಗಸೆ ತುಂಬಾ ನೀರ ಹಿಡಿದು ಕುಡಿದು ಅಲ್ಲೆ ಬಸ್ ಹತ್ತಿ ಆತನ ಊರ ಸಮೀಪದ ಪಟ್ಟಣ ಸೇರಿ ಮತ್ತೊಂದು ಬಸ್ ಹಿಡಿದು ಮನೆ ತಲುಪಿದ್ದ. ಹರಿದ ಜೇಬಲ್ಲಿ ಉಳಿದ 2 ರೂಪಾಯಿಯನ್ನು ಗಮನಿಸದೆ ತುರುಕಿದ್ದು ಎಲ್ಲೊ ಉದುರಿತ್ತು.

ಬರೋಬ್ಬರಿ 5 ದಿನ 300ಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳನ್ನು ಸಂದರ್ಶಿಸಿದ ಸಂದರ್ಶಕರಿಗೆ ಖಾಲಿ ಇರುವ ಹುದ್ದೆಗಳಿಗೆ ಕೇವಲ 12 ಮಂದಿಯನ್ನು ಆಯ್ದುಕೊಳ್ಳಬೇಕಾದ ಅಂತಿಮ ಘಟ್ಟ.ಯಾಕೊ ಆತನ ಸಿ ವಿ ಯನ್ನು ಬದಿಗೆ ಸರಿಸಲು ಅವರೀಗೆ ಆಗುತ್ತಿಲ್ಲ. ಆಯ್ಕೆ ಮಾಡಲಿರುವ ತೊದರೆಗಳೆಂದರೆ ಬಾಷೆಯಿಂದಲೂ ಮುಖ್ಯವಾಗಿ ಆತನ ಇನ್ಡಿಸಿಪ್ಲೀನ್!!!! ಯಸ್ … ಕೋಟು, ಟೈ, ಬೂಟುಗಳೊಂದಿಗೆ ಆತ ಇಂಟರ್ವೂ ಕೊಡಬೇಕಿತ್ತು ಬದಲಾಗಿ ಆತ ಬಂದಿರೋದು ಬರೀಯ ದಾರಿಹೋಕನಂತೆ. ಅದರೆ ನಿಜವೆಂದರೆ ತನಗಿದ್ದ ಅನುಕೂಲತೆಯಲ್ಲಿ ಆತ ಬಹಳ ನೀಟಾಗಿಯೆ ಇಂಟರ್ವೂ ಎದುರುಗೊಂಡಿದ್ದ. ಕಿತ್ತು ತಿನ್ನೊ ಬಡತನದ ನಡುವೆ ಈ ಮಟ್ಟಿಗೆ ಆತ ರೆಡಿಯಾಗಿದ್ದು ಆತನೀಗೆ ಹೆಮ್ಮೆಯ ವಿಷಯನೆ. ಆದರೆ ಕಾರ್ಪೊರೇಟ್ ಜಗತ್ತು ಈ ವೇಷವನ್ನು ಅತ್ಯಂತ ಹೀನಾಯವಾಗಿ ನೋಡುವ ಪರಿಸ್ಥಿತಿ ಮೊದಲು ಇತ್ತು ಈಗಲೂ ಇದೆ. ಅದೇನೆ ಇರಲಿ ಎಲ್ಲಿ ಹೋದರು ಒಳ್ಳೆಯತನಕ್ಕೆ ಹಾಗು ವಿದ್ಯೆಗೆ ಬೆಲೆ ಇರುತ್ತದೆ ಎಂಬುದು ಆತನ ಈ ಸಂದರ್ಶನ ಸಾಕ್ಷಿಯಾಗುತ್ತದೆ. ಸಂದರ್ಶಕರ ಒಳ್ಳೆಯ ಮನಸ್ಸು ಆತನನ್ನು ಆಯ್ಕೆ ಮಾಡುವ ತೀರ್ಮಾನಕ್ಕೆ ಬರುತ್ತದೆ.ಆದರೆ ಕೆಲವೊಂದು ನಿಬಂದನೆಗಳ ಜೊತೆ.

ಮುಂದಿನ ದಿನವೊಂದರಲ್ಲಿ ಆತನಿಗೊಂದು ಪೋಷ್ಟ್ ಹಾಗು 1500 ರೂ ಮನಿಯಾರ್ಡರ್ ಒಂದು ಬಂದು ತಲುಪುತ್ತದೆ. ಪೋಷ್ಟ್ ‘ಆಫರ್ ಲೆಟರ್’ ಆಗಿದ್ದು ಅದರಲ್ಲೆ ಇದ್ದ ಇನ್ನೊಂದು ಚೀಟಿಯಲ್ಲಿ ನೀಟಾದ ಬಟ್ಟೆಗಳೊಂದಿಗೆ ಬೂಟಿನ ಜೊತೆ ಬರತಕ್ಕದ್ದು ಹಾಗು ಕೆಲ ಹೊಗಳಿಕೆ ಮಾತಿನ ಒಕ್ಕಣೆ, ಬರಬಹುದಾದ ಬಸ್ ಖರ್ಚು ಹಾಗು ಬಟ್ಟೆ ಖರೀದಿಗೆ ಬೇಕಾದ ಹಣವನ್ನು MO ಮಾಡಲಾಗಿರುತ್ತದೆ,ವಸತಿ ವ್ಯವಸ್ಥೆ ಇದೆ ಎಂಬ ಸೂಚನೆ ಕೆಳಗೊಂದು ಸಹಿ ಹೆಸರಿನ ಜೊತೆ… ಆ ಹೆಸರು ಹೀರೇಶ್ ಶರ್ಮ.(company CEO). ಆತನ ಪಾಲಿನ ದೇವರು. ಅಲ್ಲಿಗೆ ವಿದ್ಯೆ ಕೈ ಹಿಡಿಯುತ್ತದೆ ಪ್ರಾಮಾಣಿಕತೆ ಕೆಲಸಕ್ಕೆ ಬರುತ್ತದೆ ಎಂಬುದು ಆತನ ಪಾಲಿಗೆ ಸತ್ಯವಾದ ದಿನ. ಜೊತೆಗೆ ಆತನ ಬದುಕಿನ ಆರಂಭ.ಮೇಲಿನ ಸಹಾಯದ ಜೊತೆ ಒಂದಷ್ಟು ಗೆಳೆಯರ ಸಹಾಯದೊಂದಿಗೆ(ಅರ್ಥಿಕವಾದದ್ದು)ಹೊಸ ಕೆಲಸಕ್ಕೆ ಎದುರುಗೊಳ್ಳಲು ಬಸ್ಸೇರಿದ್ದ.
                           “ಘಟ್ಟವೊಂದರ ಘಟನೆಗಳ ಮುಕ್ತಾಯ”

ನಿರೂಪಕನ ಮಾತುಗಳು:-
ಕಾರ್ಪೊರೇಟ್ ಕಂಪೆನಿಗಳಲ್ಲಿ ಸಹೃದಯಿಗಳಿಲ್ಲ, ದುಡಿಸಿಕೊಳ್ಳೋದಷ್ಟೆ ಬರುತ್ತದೆ, ಯಾವುದೋ ಪ್ರೊಜೆಕ್ಟ್ ಕೆಲಸ ಮುಗಿದ ನಂತರ ಮರು ಪ್ರೊಜೆಕ್ಟ್ ಗಳು ಇಲ್ಲವಂತಾದಲ್ಲಿ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಕೊಡುವ ಪರಿಸ್ಥಿತಿಗಳನ್ನು ತಂದೊಡ್ಡುತ್ತಾರೆ, ಜಾಬ್ ಸೆಕ್ಯೂರಿಟಿ ಇಲ್ಲ ಇತ್ಯಾದಿ ಇತ್ಯಾದಿ ಕಂಪ್ಲೆಂಟ್ಗಳು ಜಮಾನದಿಂದ ಇದ್ದಂತ್ತದ್ದೆ ಹಾಗು ಇದು ಅಲ್ಲವೆಂದು ಪೂರ್ತಿ ತಳ್ಳಿ ಹಾಕಲಾಗದು. ಅದು ಒತ್ತಟ್ಟಿಗಿರಲಿ ಕಾರ್ಪೊರೇಟ್ ಕಂಪನಿಯಲ್ಲು ಸಹೃದಯದ ಮಂದಿ ಇದ್ದಾರೆ ಬದುಕು ರೂಪಿಸುವವರು ಇದ್ದಾರೆ ಅನ್ನೊದಕ್ಕೆ ಮೇಲಿನ ಕಥೆಯೆ ಸಾಕ್ಷಿ.

ಮುಕ್ತಾಯ….
ಕೆಲಸ ಗಿಟ್ಟಿಸಿಕೊಂಡ ಆತ ಪರಿಸರಕ್ಕನುಗುಣವಾಗಿ ಈಗ ಬದಲಾಗುವದರ ಜೊತೆಗೆ ಆತನ ಬದುಕು ಕೂಡ ಬದಲಾಗಿದೆ. ಸುಲಲಿತವಾಗಿ ಅತನೀಗೆ ಕಬ್ಬಿಣದ ಕಡಲೆಯಾಗಿದ್ದ ಇಂಗ್ಲೀಷ್ ಕೂಡ ಆತನ ಕೈ ಹಿಡಿದಿದೆ. ಆತನ ಕೆಲಸಕ್ಕನುಗುಣವಾಗೆ ಭಡ್ತಿ ಪಡೆದು ಉನ್ನತ ಸ್ಥಾನಕ್ಕೇರಿ ಅದರ ಸವಿಯನ್ನು ಸವಿದಿದ್ದಾನೆ. ಬದುಕು ಬದಲಾಗಿದೆ ಜೊತೆಗೆ ಆತನ ಕುಟುಂಬವು ಉನ್ನತಿಗೇರಿದೆ.ಈಗಲೂ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಬರೀಯ ತನ್ನ ತಿಳಿವಿನ ಸಾಮರ್ಥ್ಯದಲ್ಲೆ ಬದುಕು ನಡೆಸುತಿದ್ದಾನೆ.ಎಂದಿಗು ವಿದ್ಯೆಯೊಂದೆ ಕೈ ಹಿಡೀಯೋದು ಎಂಬ ಸತ್ಯವನ್ನು ಮರೆತಿಲ್ಲ.ಸ್ವಾಭಿಮಾನಕ್ಕೆ ದಕ್ಕೆಯಾಗಬಲ್ಲುದು ಎಂಬಂತ ಯಾವುದೊ (ಆ ಘಟನೆ ಇಲ್ಲಿ ಅಪ್ರಸ್ತುತ) ಸನ್ನಿವೇಶ ಎದುರುಗೊಂಡಾಗ ನಿರ್ಭಿತಿಯಿಂದ ಮುಂದಿನ ದಾರಿ ಏನೆಂದು ತಿಳಿಯದಿದ್ದರೂ ಕೂಡ ರಾಜಿನಾಮೆ ಪತ್ರ ಮುಂದಿಟ್ಟು ಹೊರ ಬಂದು 7-8 ವರುಷಗಳೆ ಉರುಳಿದೆ. ಆತನ ಸ್ವಾವಲಂಬಿ ಇಚ್ಚಾಶಕ್ತಿ ಕೊರಗದೆ ಚಂದದ ಬದುಕು ನಡೆಸಲು ಇಂಬಾಗಿದೆ. ಆ ದಿನಗಳಲ್ಲೂ ಈ ದಿನಗಳಲ್ಲು ನೆಮ್ಮದಿಯಂತು ಇದ್ದೇ ಇದೆ. ಆದರೂ ಅದೊಂದು ಕೊರಗು……..ಋಣ ತೀರಿಸಲಾಗದಿದ್ದರು ಹಣ ತೀರಿಸೋಣ ಎಂದು ಆತನ ಕಾರ್ಪೊರೇಟ್ ಬದುಕಿನ ದೇವರು ಹೀರೇಶ್ ಶರ್ಮರನ್ನು ಹುಡುಕುತಿದ್ದಾನೆ.1500 ರೂ ದೊಡ್ಡ ಮೊತ್ತದ ಸಾಲವಿದೆ. ಅವರು ಅದೆಷ್ಟೊ ಪ್ರತಿಷ್ಟಿತ ಕಂಪೆನಿಗಳಲ್ಲಿ ದೊಡ್ಡ ಹುದ್ದೆ ಅಲಂಕರಿಸಿ ಕಾರ್ಪೊರೇಟ್ ಜಗತ್ತಿನಿಂದಲೆ ದೂರಾಗಿದ್ದಾರೆ ಅನ್ನೊ ಸುದ್ದಿ…..!! ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದುಡಿಯುವ ಮಂದಿಗೆ ಹೀಗ್ಯಾಕಾಯ್ತು ಎಂದು ಊಹಿಸೋದು ಕಷ್ಟವೇನಲ್ಲ. ಬಹುಶಃ ಈ ದಿನಗಳಲ್ಲಿ ಮೇಲಿನ ಘಟನೆಗಳು ನಾಟಕೀಯವಾಗಿ ಕಾಣಬಹುದು.ಒಂದು ವೇಳೆ ಮೇಲಿನ ಘಟನೆಗಳು ಆತನನ್ನು ಹೊರತು ಪಡಿಸಿ ಉಳಿದವರಿಗೆ ಹೋಲಿಕೆಯಾಗಿ ಕಂಡುಬಂದಲ್ಲಿ ಅದು ಕೇವಲ ಕಾಕತಾಳೀಯ ಮಾತ್ರ.

                                                                                    *****

ಸೆಲ್ಫಿ ಲೋಕದಲ್ಲಿ…:


ಸ್ಮಾರ್ಟ್ ಪೋನ್ ಯುಗದ ಈ ದಿನಗಳಲ್ಲಿ ಬದುಕೆಂಬುದು ಸೆಲ್ಫಿ ಮಯವಾಗಿದೆ. ಇತ್ತೀಚಿನ ದಿನಗಳಲ್ಲಿ ಏನೇನೊ ಕಾರಣಗಳಿಂದ ಈ ಸೆಲ್ಫಿ ಅನ್ನೊದು ಪ್ರಚಲಿತದಲ್ಲಿರೊ ಸುದ್ದಿ. ಆದೇನೆ ಇರಲಿ ಹೊರ ಚಿತ್ರ ಚೆನ್ನಾಗಿರಬೇಕು ಎಂಬ ತುಡಿತದಲ್ಲಿ ಮನಸ್ಸಿಗೆ ಸೆಲ್ಫಿ ಹಿಡಿಯುವ ದಿನಗಳು ಕಳೆದೆ ಹೋಗಿವೆಯೇನು? ಎಂಬ ಆತಂಕ ಇಂದಿನ ಯುವ ಸಮೂಹವನ್ನು ನೋಡಿದಾಗ ಅನಿಸುತ್ತಿದೆ. ಒಬ್ಬ ಗೆಳೆಯ, ಅಕ್ಕ, ತಮ್ಮ, ಸಂಬಂಧಿಕ, ಗುರು ಹೀಗೆ ಎಲ್ಲಾ ಸಂಬಂಧಗಳ ರುಜುವಾತು ಸೆಲ್ಫಿ ಮೂಲಕನೆ ಧೃಢಿಕರಣಗೊಳ್ಳಬೇಕೆನಿಸುವ ಈ ಯುಗದಲ್ಲಿ ಮೇಲಿನ ಆತಂಕವು ಸಹಜ. ಇಲ್ಲಿ ಸೆಲ್ಫಿಯನ್ನು ದೂಷಿಸುವ, ಒಲ್ಲೆ ಎನ್ನುವ ಯಾವ ಒತ್ತಾಯ, ತಕರಾರು ನನ್ನದಲ್ಲ ಬದಲಾಗಿ ಅತಿ ವ್ಯಾಮೋಹ ಮತ್ತು ಅದರ ಅತಿ ಪರಿಣಾಮಗಳ ಬಗ್ಗೆ ಇಲ್ಲಿ ಒಂದು ಕ್ಲುಪ್ತ ಚಿಂತನೆ.

ಸೆಲ್ಫಿ ಬಗ್ಗೆ ಇಷ್ಟೊಂದು ವ್ಯಾಮೋಹಕ್ಕೆ ಒಳಗೊಳ್ಳುವಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆ ಬಹಳವಿದೆ. ಇದಕ್ಕೆ ತಕ್ಕುದಾಗಿ ಕೈಗೆಟಗುವ ಬೆಲೆಯಲ್ಲಿ ಇಂದು ಡಿಜಿಟಲ್ ಕ್ಯಾಮಾರಗಳು, ಸ್ಮಾರ್ಟ್ ಪೋನ್ಗಳು ನಮಗೆ ದೊರಕುತ್ತಿದೆ. ತಾವೆ ಅಪ್ ಲೋಡ್ ಮಾಡಿದ ತನ್ನದೆ ಚಿತ್ರವನ್ನು ಎಲ್ಲರೂ ಮೆಚ್ಚಬೇಕು, ಗರಿಷ್ಠ ಲೈಕ್ ಪಡೆಯಬೇಕು, ಇತರರ ಗಮನ ಸೆಳೆಯಬೇಕು, ಇಂತದೆ ನೂರು ಯೋಚನೆಯಲ್ಲಿ ಈ ಸೆಲ್ಫಿ ಜಗತ್ತು ಮುಳುಗೇಳುತ್ತಿದೆ. ಅಯ್ಯೊ ನಿನಗ್ಯಾಕಪ್ಪ ಹೊಟ್ಟೆ ಉರಿ ? ಅವ್ರ ಸೆಲ್ಫಿ ಅವ್ರ ಲೈಕ್ಸ್ ನಿನ್ದೇನು ಮಧ್ಯದಲ್ಲಿ ಅಂತೀರ? ಹಿಂಗೊಂದು ಯೋಚನೆ ಬರೋದು ಸಹಜನೆ ಅದ್ರೆ ನಾಳಿನ ಸಮಾಜದ ಬಗ್ಗೆ ಅದುನ್ನ ಕಟ್ಟಿ ಕೊಡೋರು ಇಂದಿನ ಯುವ ಸಮೂಹ ಅಂತಾಗಬೇಕಾದ್ರೆ ಈ ಸೆಲ್ಫಿ ಸಿಂಡ್ರೋಮ್ ನನ್ನು ಹಾಗೆ ಇರಲಿ ಬಿಡು ಎಂದು ಸರಿಸಿ ಬಿಡಬಹುದಾದ್ದು ಖಂಡಿತ ಅಲ್ಲ. ಇದು ಸ್ವ ಪ್ರತಿಷ್ಟೆಯ ಗೀಳಾಗಿ, ಸೆಲ್ಫಿಯೊಂದರಿಂದ ವ್ಯಕ್ತಿತ್ವವನ್ನ ಅಳೆವಂತಾಗಿ ನಿಜವಾದ ಮಾನವ ಸಂಬಂಧಗಳು, ಅದರ ಸಂವೇದನೆಗಳು ಮರೆಯಾಗುತ್ತಿರುವದನ್ನು ಗಮನಿಸದೆ ಹೋದಲ್ಲಿ ಇದರಿಂದ ಮುಂದೊಂದು ದಿನ ಮಗದೊಂದಷ್ಟು ಕಷ್ಟಗಳನ್ನು ನಾವು ಎದುರುಗೊಳ್ಳಬೇಕಾದ್ದು ಕಟ್ಟಿಟ್ಟ ಬುತ್ತಿ.

ನಾನು ಬಾಲಿವುಡ್ ಹೀರೋಯಿನ್ ತರ ಕಾಣಿಸ್ಬೇಕು, ನನ್ನ ಮೂಗು ಚೂಪಾಗಿಲ್ಲ, ನನ್ನ ತುಟಿಗಳು ಅಂದವಾಗಿಲ್ಲ, ಯುವಕರಲ್ಲಾದರೆ ನನ್ಗೆ ರಫ್ ಲುಕ್ ಇಲ್ಲ ಗುಳಿ ಬೀಳುವ ಕೆನ್ನೆಗಳಿಲ್ಲ ಹೀಗೆ ತರೆವಾರಿ ಕಂಪ್ಲೆಂಟ್ ಗಳನ್ನ ಹೊತ್ತು ಕೊಂಡು ಸರ್ಜರಿ ಕಡೆಗೆ ಯುವ ಸಮುದಾಯ ಹೊರಳುತ್ತಿರೋದು ನೋಡಿದರೆ ಈ ಸೆಲ್ಫಿ ಸಿಂಡ್ರೋಮ್ ತನ್ನ ವ್ಯಾಪಕತೆಯನ್ನು ಹೇಗೆ ಹಬ್ಬಿಸಿಕೊಂಡಿದೆ ಎನ್ನುವದು ನಮಗರಿವಾಗಬಹುದು.5000 ದಿಂದ 150000 ವರೆಗಿನ ಪ್ಲಾಸ್ಟಿಕ್ , ಕಾಸ್ಮೇಟಿಕ್ ಸರ್ಜರಿಗಳು ಈ ದಿನಗಳಲ್ಲಿದ್ದು ಎಲ್ಲವು ಲಾಭದಾಯಕವಾಗಿ ನಡೆಯುವಂತೆ ಮಾಡುವಲ್ಲಿ ಈ ಸೆಲ್ಫಿ ಜಗತ್ತು ತನ್ನ ಗಣನೀಯ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರೆ ತಪ್ಪಿಲ್ಲ.ಒಂದು ಅಂಕಿ ಅಂಶದ ಪ್ರಕಾರ ಶೇಕಡ 35 ಮಂದಿ ಹದಿ ಹರೆಯದವರು ಪ್ಲಾಸ್ಟಿಕ್/ ಕಾಸ್ಮೋಟಿಕ್ ಸರ್ಜರಿಯನ್ನ ಮಾಡಿಸಿಕೊಳ್ಳುತಿದ್ದಾರೆ. ತಮ್ಮ ಅಂಗ ಭಂಗಿಗಳು ಯುನಿಕ್ ಆಗಿರಬೇಕು ಎಂಬ ಭರದಲ್ಲಿ ಪ್ರಕೃತಿ ತನಗೊದಗಿಸಿದ ಸಹಜ ಸೌಂದರ್ಯವನ್ನು ವಿರೂಪಗೊಳಿಸುತ್ತಿದ್ದೇವೆ, ಆ ಮೂಲಕ ಜೀವನ ಪೂರ್ತಿ ಕಾಸ್ಮಿಟಿಕ್ ಗಳನ್ನೆ ಅವಲಂಬಿಸಬೇಕಾದ ಅನಿವಾರ್ಯತೆಗಳೆಡೆಗೆ ನಮ್ಮನ್ನು ನಾವಾಗೆ ದೂಡಿಸಿಕೊಳ್ಳುತಿದ್ದೇವೆ.

ಒಂದು ಸೆಲ್ಫಿಯನ್ನು ತಂತ್ರಜ್ಞಾನದ ಫಲದಿಂದ ಮತ್ತಷ್ಟು ಉತ್ತಮಗೊಳಿಸಿ ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ ಮರುಕ್ಷಣದಿಂದ ಮನಸ್ಸು ಖಿನ್ನತೆ ಕಡೆ ವಾಲುತ್ತದೆ. ಎಷ್ಟು ಜನ ಲೈಕಿಸಿರಬಹುದು, ಪ್ರತಿಕ್ರಿಯೆಗಳು ಎಷ್ಟಿರಬಹುದು, ಇವುಗಳಲ್ಲಿ ಪರಿಚಿತರು ಯಾರು? ಅಪರಿಚಿತರು ಯಾರು ಇವೆ ಇತ್ಯಾದಿ ಯೋಚನೆಯೊಳಗೆ ಮುಳುಗಿ ಮಾಡಬೇಕಾದ ಕೆಲಸಗಳತ್ತ ಉದಾಸೀನ. ಒಂದಷ್ಟು ಲೈಕ್ ಕಮೆಂಟ್ ಸಿಕ್ಕಿದ್ದೆ ತಡ ಈ ಸೆಲ್ಫಿ ಹುಚ್ಚು ಚೂರು ಚೂರೆ ಚಿಗಿತುಕೊಳ್ಳುತ್ತದೆ, ಸಾಲು ಸಾಲು ಸೆಲ್ಫಿ ತೆಗೆಸಿಕೊಂಡು ಮತ್ತಷ್ಟು ಮಗದಷ್ಟು ಪ್ರತಿಕ್ರಿಯೆ, ಲೈಕ್ ಗಳ ನಿರೀಕ್ಷೆಯಲ್ಲಿ ಯಾವ ಸೆಲ್ಫಿಗಳು ಮೆಚ್ಚುಗೆಯಾಗದೆ ಒಂದು ಉತ್ತಮ ಸೆಲ್ಫಿಗಾಗಿ ಹುಡುಕುತ್ತಲೆ ಅಸಹನೆಯೊಂದಿಗೆ ಸ್ಟಂಟ್ ಮಾಡಲೋಗಿ ಕೈ ಕಾಲು ಮುರಿದುಕೊಂಡ ಉದಾಹರಣೆಗಳು ಈ ಸೆಲ್ಫಿ ಜಗತ್ತಿನಲ್ಲಿದೆ. ಹಲವಷ್ಟು ಮೊಬೈಲ್ ಪುಡಿಗೊಂಡಿದ್ದು ಇದೆ. ಕೆಲವೊಮ್ಮೆ ಹೀಗೂ ಆಗುತ್ತದೆ…..ಅದು ಹೇಗೆಂದರೆ ನಿರೀಕ್ಷಿತ ಪ್ರತಿಕ್ರಿಯೆ ಮೆಚ್ಚುಗೆಗಳು ಸೆಲ್ಫಿಗೆ ಬಾರದೆ ಹೋದಲ್ಲಿ ನಿರಾಶೆ, ಹತಾಶೆ, ಕೀಳರಿಮೆ ತುಂಬಿಕೊಂಡು ಮನಃಕ್ಲೇಶಗಳನ್ನು ತಂದುಕೊಂಡು ಮಬ್ಬಾಗುವವರನ್ನು ತನ್ನೊಳಗೆ ಇರಿಸಿಕೊಂಡಿದೆ ಈ ಸೆಲ್ಫಿ ಜಗತ್ತು. ಸಮೀಕ್ಷೆಯ ಪ್ರಕಾರ ಶೇಕಡ 80 ರಷ್ಟು ಮಂದಿ ಸೆಲ್ಫಿ ತೆಗೆದುಕೊಳ್ಳುವವರಿದ್ದು ನಾವೇನು ಸೆಲ್ಫಿ ಸಿಂಡ್ರೋಮ್ ಅಂತ ಮಾತಾಡ್ತ ಇದ್ದೇವೊ ಅದು ಈ 80% ದಲ್ಲಿ ಸೂಮಾರು 60% ದಷ್ಟು ಜನರಿಗಿದೆ.ಈಗ ಹೇಳಿ ಬರೀಯ ಸೆಲ್ಫಿ ಎಂದು ಸರಿಸಿಬಿಡಬಹುದಾದ ವಿಷಯನಾ ಇದು? ಒಂದಿಡಿ ಸಮುದಾಯ ಸೆಲ್ಫಿಯ ಹಿಂದೆ ಬಿದ್ದು ಕ್ರೀಯಾಶೀಲತೆಯನ್ನು ಮರೆತು ಖಿನ್ನತೆ, ಅಕ್ರೋಶದಿಂದ,ಅತ್ಮ ವಿಶ್ವಾಸವನ್ನು ಕೊಂದುಕೊಂಡು ಬದುಕುತ್ತಿದೆ ಎಂದರೆ ಅದರ ಮುಂದಿನ ಪರಿಣಾಮ ಎಂತದ್ದಿರಬಹುದು? ಅದು ಸೆಲ್ಫಿ ಕಡೆ ಹೆಚ್ಚಿನ ಆಕರ್ಷಣೆ ಹೊಂದಿದವರು ಯಾರು ಅಂತೀರಿ? ಅಧ್ಯನಗಳು ಧೃಡಪಡಿಸಿದಂತೆ 16 ರಿಂದ 26 ವರುಷದವರೆಗಿನ ಮಂದಿ!!! ಯಾರು ಜೀವನ ರೂಪಿಸಿಕೊಳ್ಳಬೇಕಾದ ಹಂತದಲ್ಲಿರುತ್ತಾರೊ ಅವರುಗಳು.ಅಂದ್ರೆ ಸೆಲ್ಫಿ ಅನ್ನೊ ಗೀಳು ಮದ್ಯಪಾನ, ಧೂಮಪಾನ, ಜೂಜಿನಂತೆಯೆ ಒಂದು ಮಾರಕ ಚಟವಾಗಿ ಬಾಧಿಸಬಹುದು ಎನ್ನುವದನ್ನು ನಿರಾತಂಕವಾಗಿ ಹೇಳಬಹುದಾಗಿದೆ.

ತನ್ನ ಅಂಗಾಂಗಗಳು ಹಾಗಿರಬೇಕಿತ್ತು ಹೀಗಿರಬೇಕಿತ್ತು ಕಲರ್ರು ಬೇಳ್ಳಗಿರಬೇಕಿತ್ತು ಹೀಗೆ ಏನೇನು ಅವಾಸ್ತವಿಕ ನಿರೀಕ್ಷೆಗಳು,ಅಸ್ವಾಭಾವಿಕ ಹೋಲಿಕೆಗಳು, ಅನಿಯಂತ್ರಿತ ಬಯಕೆಗಳನ್ನು ಹುಟ್ಟು ಹಾಕೊ ಸೆಲ್ಫಿ ಗೀಳು, ಊಟ ಪಾಠ ನೆಮ್ಮದಿ ಯನ್ನು ಕಳಕೊಂಡು ಖಿನ್ನತೆಯನ್ನು ತರಬಹುದಾದ ಸೆಲ್ಫಿ ಜಗತ್ತಿನ ಬಗ್ಗೆ ತುಸು ಅರಿವು ಎಚ್ಚರಗಳು ಹಾಗು ಅದರ ಮೆಲೊಂದು ನಿಯಂತ್ರಣ ನಮಗಿರೋದು ಉತ್ತಮ.ನಾ ಹೇಗಿದ್ದೇನೊ ಹಾಗೆ ಬೇರೆಯವರಿಗೆ ಒಪ್ಪಿಸಿಕೊಳ್ಳೊ ಮೊದಲು ತನಗೆ ತಾನೆ ಒಪ್ಪಿಸಿ ಸಂಭ್ರಮ ಪಡಬೇಕಿರೋದು ಮುಖ್ಯ. ಇನ್ಮುಂದೆ ಸೆಲ್ಫಿಗಳು ಬೇಡ ಎಂದು ಹೇಳುವದು ಅವಾಸ್ತವಿಕ. ಸೆಲ್ಫಿಗಳ ಗೀಳು ಹಚ್ಚಿಕೊಳ್ಳದೆ ಸೆಲ್ಫಿಗಳು ಪ್ರದರ್ಶನಕ್ಕಿರದೆ ನಮ್ಮ ನೆನಪಿಗಾಗಿ ನಮ್ಮಗಳಿಗಾಗಿಯಷ್ಟೆ ಒಳಿತಾಗಿ ಬಳಕೆಯಾಗೋದು ಮುಖ್ಯ.ಮಕ್ಕಳೊಂದಿಗೆ ಆತ್ಮೀಯರಾಗಿ ಗೆಳೆಯರಾಗಿದ್ದುಕೊಂಡು ಅವರನ್ನ ಕುಟುಂಬಕ್ಕೆ ಹತ್ತಿರವಾಗಿರುವಂತೆ ನೋಡಿಕೊಳ್ಳೋದು ಮುಖ್ಯ, ಕಾರಣ ತನ್ನವರಿಂದ ದೂರಾದವರು ತನ್ನವರೆನಿಸಿಕೊಳ್ಳೊ ಮಂದಿಯ ಹುಡುಕಾಡೊ ದಾರಿಯಲ್ಲಿ ಈ ಸೆಲ್ಫಿಯು ಸುಲಭ ರಹದಾರಿಯ ಹಾಗೆ ಕಾಣುತ್ತದೆ.ಕ್ರಮೇಣ ಸೆಲ್ಫಿ ಗೀಳನ್ನು ಹಚ್ಚಿಕೊಳ್ಳಬಹುದು. ಚೆನ್ನಾಗಿರೊ ಕುಟುಂಬ, ಗೆಳೆಯರೊಂದಿಗೆ ಉತ್ತಮ ಸಂವಹನ, ಹಿರಿಯರಾದವರು ಕಿರಿಯರ ಬಗ್ಗೆ ಒಂಚೂರು ತೋರಬಲ್ಲ ಕಾಳಾಜಿ ಇವೆಲ್ಲವು ಒಳ್ಳೆಯದಾಗಿದ್ದರೆ ಈ ಸೆಲ್ಫಿ ಹುಚ್ಚು ಅತಿಯಾಗದೆ ಹಿತವಾಗಿ ನೆನಪುಗಳನ್ನು ಅವಲೋಕಿಸಲು ಸುಲಭದ ಹಾದಿಯಾಗಿ ಮೆದುಳಿಗೆ ಚೈತನ್ಯದಾಯಕವಾಗಿ ಆಗರವಾಗಬಲ್ಲುದಾದ ಕ್ರಿಯೆ ಎಂದು ತಜ್ಞರು ಸೆಲ್ಫಿ ಬಗ್ಗೆ ವಿಶ್ಲೇಶಿಸುತ್ತಾರೆ.

ನಮ್ಗೊಂದು ಖಾಯಿಲೆಯಲ್ಲದ ರೋಗವಿದೆ ಅದ್ಯಾವುದೆಂದರೆ ಯಾವದು ಕೂಡ ನಮ್ಮರಿವಿಗೆ ಬರೊ ಮುಂಚೆ ನಾವೆಚ್ಚೆತ್ತುಕೊಳ್ಳದಿರೊದು. ಈ ಸೆಲ್ಫಿ ಸಿಂಡ್ರೋಮ್ ಕೂಡ ಅದೆ ತರದ್ದು. ಬಹುಶಃ ಈ ಸೆಲ್ಫಿ ಬಗ್ಗೆ ಇಷ್ಟು ಬರೆದುಕೊಳ್ಳಬೇಕಿತ್ತ??ಎಂದು ತಮ್ಮಲ್ಲಿ ಪ್ರಶ್ನೆಗಳಿದ್ದರೆ ಉತ್ತರಿಸಿದ್ದೇನೆ ಎಂದೆನ್ನುಕೊಳ್ಳುತ್ತೇನೆ. ಸಾಮಾಜಿಕ ಜಾಲ ತಾಣಗಳಿಂದಾಗಿಯೆ ಈ ಸೆಲ್ಫಿ ಗೀಳು ವಿಪರೀತವಾಗಿದೆ ಎಂಬ ವಾದವು ಒಪ್ಪ ತಕ್ಕದ್ದೆ ಆದರೆ ಸೆಲ್ಫಿಯನ್ನು ಒಳಿತಾಗಿ ಬಳಸಬಹುದಾದ ನಿಯಂತ್ರಣತೆ ನಮಗೆ ಸಾಮಾಜಿಕ ತಾಣಗಳ ಮೇಲಿಲ್ಲ. ಅದು ಎಲ್ಲವನ್ನೂ ಸ್ವಿಕರಿಸುವಂತದ್ದು. ಬಳಕೆದಾರರಾದ ನಮಗೆ ಎಚ್ಚರವಿರಬೇಕಷ್ಟೆ. ನಾ ಸೆಲ್ಫಿ ಗೀಳಿನ ದ್ವೇಷಿಯೆ ಹೊರತು ಸೆಲ್ಫಿಯದ್ದಲ್ಲ ಎಂಬುದನ್ನು ಮಗದೊಮ್ಮೆ ನೆನೆಪಿಸುತ್ತಾ ಮತ್ತೆ ಸಿಕ್ಕಾಗ ನನ್ಜೊತೆ ಒಂದು ಸೆಲ್ಫಿ ಪ್ಲೀಸ್….ನಿಮ್ಮ ನೆನಪಿಗಾಗಿ ನನ್ನ ತಿಜೋರಿಯಲ್ಲಿ ಜಾಗವಿರಿಸಿಕೊಳ್ಳುವೆ. 

                                                                     *****

Saturday, March 8, 2014

ನಮ್ಮದೆ ವಿನಾಶದ ಘೋರಿಗೆ ಮಗದೊಂದು ಕಲ್ಲು!

ಜೀವ ಸಂಕುಲವೆಂಬುದು ಪ್ರಕೃತಿ ಎಂಬ ತಾಯ ಗರ್ಭದಿಂದ ಜನಿಸಲಾರದ್ದು.ಅದೇನಿದ್ದರೂ ಅಲ್ಲೆ ಹುಟ್ಟಿ ಅದರೊಳಗೆ ಜೀವಿಸಿ ಅಲ್ಲೆ ಲೀನವಾಗಬೇಕೆಂಬುದು ನಮ್ಮ ಸಲಹುವ ಪ್ರಕೃತಿಯ ನಿಯಮ, ಜೀವಗಳು ಗರ್ಭ ಮುರಿದುಕೊಂಡು ಜನಿಸಲಿಚ್ಚಿಸಿದಷ್ಟು ತಾಯ ಗರ್ಭ ಸೀಳುತ್ತದೆ, ಜೀವ ಸಂಕುಲವನ್ನು ಸಲಹೊ ತಾಯ ಅಳಿವು ವಿನಾಶವನ್ನು ತಂದೊಡ್ಡುತ್ತದೆ. ಈ ಸಮಾಧಿಯನ್ನು ನಾವು ಕಟ್ಟಲು ಶುರು ಮಾಡಿ ಬಹಳ ವರುಷಗಳೆ ಕಳೆದಿದೆ. ನಮ್ಮನ್ನು ನಾವು ಅಂತ್ಯಗೊಳಿಸುವದಕ್ಕೆ ಬೇಕಾದ ಸರ್ವ ವಿಧದ ತಯಾರಿಯಲ್ಲು ನಾವು ತೊಡಗಿದ್ದೇವೆ. ವಿನಾಶವೆಂಬ ಈ ಸಮಾಧಿಗೆ ಮತ್ತೊಂದು ಕಲ್ಲು ಪೇರಿಸಿದ್ದು ಮೊನ್ನೆ ನಮ್ಮ ಮುಖ್ಯಮಂತ್ರಿಗಳು. ‘ಎತ್ತಿನ ಹೊಳೆ ಯೋಜನೆ’ ಎಂಬುದು ಆ ಸಮಾಧಿ ಕಲ್ಲಿನ ಹೆಸರು.

ಪ್ರಕೃತಿಯೊಡಲ ಕರುಳ ಬಳ್ಳಿ ಪಶ್ಚಿಮ ಘಟ್ಟವನ್ನು ಘಾಸಿಗೊಳಿಸಿ ನದಿಯೊಂದರ ಉಪನದಿಯನ್ನು ಹುಟ್ಟಿನ ಸ್ಥಳದಲ್ಲೆ ಮುರುಟಿ ಆ ಮೂಲಕ ಅದರ ವಿನಾಶಕ್ಕೂ ಅಡಿಗಲ್ಲಿಕ್ಕುವ ಯೋಜನೆಯೆ ಎತ್ತಿನ ಹೊಳೆ ಯೋಜನೆ ಎನ್ನುವದು ಒಂದು ವಾಕ್ಯದ ವಿವರಣೆಯಾದರೆ ಇನ್ನಷ್ಟು ಸ್ಥೂಲವಾಗಿ ವಿವರಿಸುವದಿದ್ದರೆ…… ಎತ್ತಿನ ಹಳ್ಳ ಎಂಬುದು ಕೆಂಪುಹೊಳೆಯೊಂದಕ್ಕೆ ಬಂದು ಸೇರುವ ಒಂದು ಹಳ್ಳವಷ್ಟೆ. ಅದ್ಯಾಕೊ ಇದು ಇತ್ತೀಚೆಗೆ ಪ್ರಮೋಷನ್ ಪಡೆದು ಹೊಳೆಯಾಗಿದೆ.ಈ ಹಳ್ಳದಿಂದ ಪ್ರಕೃತಿ ನಿಯಮ ಮೀರಿ 24 ಟಿ ಎಂಸಿ ನೀರು ತುಮಕೂರು, ಬೆಂಗಳೂರು ಗ್ರಾಮಾಂತರ,ಚಿಕ್ಕಬಳ್ಳಾಪುರ ಮೂಲಕ ಕೋಲಾರಕ್ಕೆ ಹರಿಯಬೇಕು ಇದಕ್ಕಾಗಿ ವ್ಯಯ ಮಾಡುವ ವಿದ್ಯುತ್ 350 ಮೆಗಾ ವ್ಯಾಟ್ .ಯೋಜನಾ ಗಾತ್ರ ಸುಮಾರು 2900 ಕೋಟಿ ರುಪಾಯಿ.ಈ ಮೂಲಕ ಹಲವು ಜಿಲ್ಲೆ, ಹಳ್ಳಿ, ಪಟ್ಟಣ ಗಳಿಗೆ ಕುಡಿಯುವ ನೀರು ಒದಗಿಸುವದು ಸರ್ಕಾರದ ಯೋಜನೆ. ಕೇಳುವದಕ್ಕೂ ಸರ್ಕಾರದ ಈ ಬಗ್ಗಿನ ನಾಟಕ ನೋಡುವದಕ್ಕೂ ಬಹಳ ಠಾಕೂ ಠೀಕಿನ ಮಸ್ತ್ ಯೋಜನೆಯಾಗಿ ನಮಗೆ ದಕ್ಕುತ್ತಿರುವದು ಸುಳ್ಳಲ್ಲ, ಹಲವರೂ ಹೀಗೆ ಅಂತ ನಂಬಿದ್ದಾರೆ ಕೂಡ. ಆದರೆ ವಾಸ್ತವ ಇದಲ್ಲ ಅನ್ನುವದು ಅಷ್ಟೆ ಸತ್ಯ.

ಎತ್ತಿನ ಹೊಳೆಯಲ್ಲಿ ಮಾರ್ಚ್ ಎಪ್ರೀಲ್ ಮೇ ತಿಂಗಳಲ್ಲಿ ದೊರಕಬಹುದಾದ ನೀರಿನ ಪ್ರಮಾಣ ಏನು? ನಾಶವಾಗುವ ಅರಣ್ಯ ಸಂಪತ್ತಿನ ಅಂದಾಜು ಏನು? ರಚಿಸಬಹುದಾದ ಸಣ್ಣ ಸಣ್ಣ ಚೆಕ್ ಡ್ಯಾಂ ಗಳಿಂದ ಮಳೆಗಾಲದಲ್ಲಿ ಪಂಪ್ ಮಾಡಿದ ನೀರಲ್ಲಿ ವರುಷ ಪೂರ್ತಿ ಬಯಲು ಸೀಮೆಗೆ ನೀರುಣಿಸಲು ಸಾಧ್ಯವೆ? ( ಅಸಂಬದ್ದವಾಗಿ ಮಳೆಗಾಲದಲ್ಲಿ ಮಾತ್ರ ಪಂಪ್ ಮಾಡಲಾದ ನೀರನ್ನು ಹರಿಸಲಾಗುವದು ಎಂಬ ಮಾತು ಅಲ್ಲಲ್ಲಿ ಕೇಳಿ ಬರುತ್ತಿದೆ ). ಸದನದಲ್ಲಿ ಎಂಸಿ ನಾಣಯ್ಯ ಎತ್ತಿನ ಹೋಳೆ ಯೋಜನೆಯ ಶಂಕುಸ್ಥಾಪನೆ ಮೊದಲು ಕರಾವಳಿ ಜನರ ಅಭಿಪ್ರಾಯ ಕೇಳಿಲ್ಲ ಅನ್ನುವ ಮಾತಿಗೆ ಸರ್ಕಾರದ ನೀರಾವರಿ ಸಚಿವರೆ ಹೌದು ಅಂದಿದ್ದರು.ಹಾಗಿದ್ದಲ್ಲಿ ಈ ನಿಟ್ಟಲ್ಲಿ ಕನಿಷ್ಟ ಸೌಜನ್ಯವನ್ನೂ ಸರ್ಕಾರ ಮೀರಿತೆ? ಈ ತರಾತುರಿಯ ನಿರ್ಧಾರಗಳು ಸರ್ಕಾರದಿಂದ ಬಂದಿದ್ದಾದರೂ ಏಕೆ?ಹೋಗಲಿ ಇಷ್ಟು ದೊಡ್ಡ ಮಟ್ಟದ ಯೋಜನೆಯೊಂದಕ್ಕೆ DPR (Detailed Project Report) ಇನ್ನೂ ಸಿದ್ದವಾಗಿಲ್ಲ.ಈ ಯೋಜನೆಯ ಉಸ್ತುವಾರಿಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ವಹಿಸಲಾಗಿದ್ದು ಯೋಜನೆಯ ಜಾರಿಗೆ ಅದು ಅವಲಂಬಿಸಿರುವದು ಖಾಸಗಿ ಸಂಸ್ಥೆಗಳ ದಾಖಲೆಯ ಮಳೆ ಪ್ರಮಾಣದ ಲೆಕ್ಕಾಚಾರ, ಕಾರಣ ತನ್ನದೆ ಜಲಸಂಪನ್ಮೂಲ ಇಲಾಖೆಯ 22 ವರುಷಗಳ ಮಳೆಯ ಪ್ರಮಾಣದ ದಾಖಲೆಗಿಂತ ಖಾಸಗಿ ಸಂಸ್ಥೆಯ ಮಳೆ ಪ್ರಮಾಣದ ದಾಖಲೆ ಹೆಚ್ಚಿರುವದು. ಧಾಖಲೆಗಳು ಇಂತಿವೆ…..(ಮಾಹಿತಿ www.sundararao.blogspot.com)


1.ಕನೀನಿನಿಯ ಭದ್ರಾ ಮೇಲ್ದಂಡೆ ಯೋಜನಾವಲಯದ ಮುಖ್ಯ ಎಂಜಿನಿಯರ್ ದೆಹಲಿಗೆ ಬರೆದ ಪತ್ರದಲ್ಲಿ: 6500 ಮಿ.ಮೀ.
2. ಕನೀನಿನಿಯ ಯೋಜನಾ ವರದಿಯಲ್ಲಿ: 6280 ಮಿ.ಮೀ
3. ಕನೀನಿನಿಯ ತಪ್ಪು ಲೆಕ್ಕಾಚಾರವನ್ನು ತಿದ್ದಿದಾಗ: 6210 ಮಿ.ಮೀ
4. ನಾಲ್ಕೂ ಖಾಸಗಿ ಮಳೆಮಾಪನ ಕೇಂದ್ರಗಳನ್ನು ಪರಿಗಣಿಸಿದಾಗ : 5695 ಮಿ.ಮೀ
5. ಜಲಸಂಪನ್ಮೂಲ ಇಲಾಖೆಯ 22 ವರ್ಷಗಳ ಅಂಕಿಅಂಶದ ಸರಾಸರಿ: 3072 ಮಿ.ಮೀ.
6. http://www.samsamwater.com/climate/ ಎಂಬ ಜಾಲತಾಣದ ಪ್ರಕಾರ ಸುಮಾರು 3000 ಮಿ.ಮೀ. 


ಯಾಕೀ ಗೊಂದಲ???? ಇಷ್ಟು ದೊಡ್ಡ ಮೊತ್ತದ ಯೋಜನೆಯ ಅನುಷ್ಠಾನದ ಮೊದಲು ಸಣ್ಣದಾಗಿ ಕಾಣುವ ದೊಡ್ಡ ಗೊಂದಲಗಳು ಪರಿಹಾರವಾಗಬೇಕಲ್ವೆ? ಹಾಗಾದರೆ 24 ಟಿ ಎಂಸಿ ನೀರು ಬರೀಯ ಬಾಯಿ ಮಾತೆ?ಎತ್ತಿನ ಹೊಳೆ ಬಗ್ಗೆ ಬಹಳಷ್ಟು ತಜ್ಞರ ಅಭಿಪ್ರಾಯವ 5 ಟಿ ಎಂ ಸಿ ಗಿಂತ ಜಾಸ್ತಿ ನೀರು ದೊರೆಯುವದು ಕಷ್ಟವೇ ಸರಿ ಎಂಬುದು.ಹಾಗಿದ್ದರೆ ಈ ಯೋಜನೆಯ ಸಾರ್ಥಕಥೆ ಏನು? ಅತ್ತ ಪರಿಸರ ನಾಶ, ಇತ್ತ ನದಿಯೊಂದರ ಮೂಲಕ್ಕೆ ಕೊಡಲಿಯೇಟು. ಅಷ್ಟು ಬಿಟ್ಟರೆ ಮುಂದೇನೂ ಕಾಣುವದಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳದ ಸರ್ಕಾರ ಯೋಜನೆಯೊಂದರ ಮುಂದುವರಿದ ಭಾಗವಾಗಿ ಕೆಂಪು ಹೊಳೆಗೆ ಕೈ ಯಿಕ್ಕುತ್ತದೆ,ತದ ನಂತರ ಕುಮಾರಧಾರ,ಕರಿ ಹೊಳೆ ಇತ್ಯಾದಿ ಇತ್ಯಾದಿ ಮುಂದುವರಿದು ನೇತ್ರಾವತಿಯ ಮೂಲಗಳೆಲ್ಲ ಅಳಿದು ನದಿಯೊಂದು ಅಳಿಯುವ ತನಕ ಸರ್ಕಾರದ ಯೋಜನೆ ಮುಗಿಯಲ್ಲ. ಅಲ್ಲಿಗೆ ಬರ ಹೋಗಲಾಡಿಸಲು ಹರಿವ ನದಿ ತಿರುಗಿಸಿದ ಸರ್ಕಾರ ಮಗದೊಂದು ಬರ ನಾಡನ್ನು ಸೃಷ್ಠಿಗೊಳಿಸುವದು ಖರೆ. ಕರಾವಳಿಯ ಜನತೆಯ ಆತಂಕ ಈ ಸಂದಿಗ್ದತೆಯಲ್ಲಿ ನಿಂತಿದೆ. ಸರ್ಕಾರ ಈ ಗೊಂದಲಗಳನ್ನು ಪರಿಹರಿಸಬೇಕಿತ್ತು ಆದರೆ ಈಗ ಲೋಕಸಭಾ ಚುನಾವಣೆ ಘೋಷಣೆಯಾಗಿದೆ…ಸೋ ನೀತಿ ಸಂಹಿತೆಯೆಂಬ ಬೀಗ ಸರ್ಕಾರಕ್ಕೆ ಬಿದ್ದಿದೆ, ಅಲ್ಲಿಗೆ ಗೊಂದಲಗಳು ಗೊಂದಲಗಳಾಗೆ ಮುಂದುವರಿಯಬೇಕಾದ್ದು ಅನಿವಾರ್ಯ.ಹಾಗು ಈ ನಿಟ್ಟಲ್ಲಿ ತರಾತುರಿಯ ಶಂಕುಸ್ಥಾಪನೆಯ ಸರ್ಕಾರದ ಹಿಂದಿನ ಉದ್ದೇಶ ಸ್ಪಷ್ಟ.

ಮಂಗಳೂರಿನಂತ ಪಟ್ಟಣ ಇನ್ನು 2-3 ವರುಷಗಳಲ್ಲಿ ಇನ್ನಷ್ಟು ಬೆಳೆಯಲಿದೆ. ನೇತ್ರಾವತಿಗೆ ಅಡ್ಡಲಾಗಿ ಕಟ್ಟಿರುವ ಬಂಟ್ವಾಳ ಬಳಿಯ ತುಂಬೆ ಢ್ಯಾಂ ಮಂಗಳೂರು ಪಟ್ಟಣಕ್ಕೆ ಕುಡಿಯುವ ನೀರೊದಗಿಸುತ್ತದೆ. ಸದ್ಯಕ್ಕೆ ಮಾರ್ಚ್ ನಂತರ ಪೂರ್ಣ ಪ್ರಮಾಣದಲ್ಲಿ ಅವಶ್ಯಕತೆಗಳಿಗೆ ತಕ್ಕಂತೆ ನೀರೊದಗಿಸಲು ಸರ್ಕಸ್ ಮಾಡಬೇಕಾಗಿ ಬಂದಿದೆ. ಅರೆ ನಿಮಗೇನು 6 ರಿಂದ 12 ಮೀಟರ್ ಆಳ ತೆಗೆದರೆ ನೀರು ಸಿಗುತ್ತದೆ ಎಂಬ ಮಾತು ಕೇಳಿ ಬರಬಹುದು. ಅದರೆ ಕರಾವಳಿ ತೀರದ ಶೇಕಡಾ 60 ರಷ್ಟು ನೀರು ಉಪ್ಪು ಹಾಗು ಬಳಕೆಗೆ ಯೋಗ್ಯವಲ್ಲದ್ದು.ಇಲ್ಲದಿದ್ದಲ್ಲಿ 40 ಕಿ ಮಿ ಮೊದಲೆ ಡ್ಯಾಂ ಕಟ್ಟ ಬೇಕಾದ ಅವಶ್ಯಕತೆ ಇರಲಿಲ್ಲ. ಪರಿಸ್ಥಿತಿ ಈ ತೆರನಾಗಿರಬೇಕಾದರೆ ಕರಾವಳಿಯ ಲೈಪ್ ಲೈನ್ ನೇತ್ರಾವತಿಯೆಂಬ ನದಿಗೆ ಘಾಸಿಗೊಳಿಸುವ ಸರ್ಕಾರದ ಯೋಜನೆ ಸಮರ್ಪಕವಾದುದಲ್ಲ ಎಂಬುದು ಅರಿವಾಗುತ್ತದೆ. 

ನೀರು ದೇಶದ ಆಸ್ತಿ, ನೀರು ಕೆಳಗೆ ಹರಿಯಬೇಕೆಂದರೆ ಮೇಲಿನವರೇನು ಸಾಯೋದ? ಎಂಭ ಮಾತುಗಳು ಕೇಳಿ ಬರುತ್ತವೆ. ಖಂಡಿತ ಯಾರು ಹಾಗಂದುಕೊಂಡಿಲ್ಲ. ಬಯಲು ಸೀಮೆಯಲ್ಲಿ ಇವರೇನು ಎತ್ತಿನ ಹೊಳೆಯ ನೀರ ಮೂಲಕ ತುಂಬಿಸಬೇಕೆಂದುಕೊಂಡಿರುವ 311 ಕೆರೆಗಳೂ ಸೇರಿ ಒಟ್ಟು ಸುಮಾರು 528 ಕೆರೆಗಳಿಗೆ ಮರು ಜೀವ ಕೊಡುವ ಮತ್ತೊಂದು ಸಲಹೆ ಸರ್ಕಾರದ ಮುಂದಿದೆ. ಇದಕ್ಕೆ ತಗಲುವ ವೆಚ್ಚ ಬರೀಯ ಮುನ್ನೂರರಿಂದ ನಾಲ್ಕೂನೂರು ಕೋಟಿಗಳು. ಸರ್ಕಾರಕ್ಕೆ ಯಾಕೊ ಈ ಪರಿಹಾರ ಯೋಜನೆ ಪಥ್ಯವಾಗಿಲ್ಲ. ಅದಕ್ಕೇನಿದ್ದರೂ ದೊಡ್ಡೆತ್ತಿನ ಬಾಲವೆ ಬೇಕು. ಎತ್ತಿನ ಹೊಳೆ ಮುಂದುವರಿದು ಕೆಂಪು ಹೊಳೆ ಇತ್ಯಾದಿ ಇತ್ಯಾದಿ ಯೋಜನೆ ಎಂಬ ಚಿನ್ನದ ಮೊಟ್ಟೆ ಇಡುವ ಕೋಳಿ ಯನ್ನು ಉದ್ದೇಶ ಪೂರ್ವಕವಾಗೆ ಅಪ್ಪಿಕೊಂಡಿದೆ.ಇದಕ್ಕಾಗಿ ವಿಶ್ವ ಪರಂಪರೆಗೆ ಸೇರಬಹುದಾದ ಪಶ್ಚಿಮ ಘಟ್ಟವನ್ನೂ ಸರ್ಕಾರ ಗಣ್ಯವಾಗಿಸಿಲ್ಲ. ಪವರ್ ಪ್ರಾಜೆಕ್ಟ್, ಪೆಟ್ರೋಲಿಯಂ ಸಾಗಾಟಕ್ಕೆ ಪೈಪ್ ಲೈನ್ ಇತ್ಯಾದಿ ಕಾರಣಗಳಿಗೆ ನಾಶವಾದ ಕಾಡಿನ ಪರಿಣಾಮದಿಂದ ಇಲ್ಲಿನ ಜನತೆ ಹೊರ ಬಂದಿಲ್ಲ. ಪ್ರಾಣಿಗಳು ತಾವಿಲ್ಲದೆ ನಾಡಿಗೆ ಬರ ತೊಡಗಿದೆ. ಮುಗಿದಂತ ಪ್ರೊಜೆಕ್ಟ್ ಗಳ ಇಪೆಕ್ಟ್ ಎಂಬಂತೆ ಆನೆಗಳ ಧಾಳಿಗೆ ಸುತ್ತಲಿನ ಜನತೆ ವಾರಕ್ಕೊಬ್ಬರಂತೆ ಆಹುತಿಯಾಗುತಿದ್ದಾರೆ. ಇದರ ಪರಿಣಾಮ ಆನೆ ಕಾರಿಡಾರಿಗೆ ಒಂದಷ್ಟು ಜಾಗವನ್ನು ಸಕಲೇಶಪುರ ಸುತ್ತಲಿನ ಮಂದಿ ನೀಡಬೇಕಾಗಿದೆ. ಬದುಕೆಂಬುದು ಪ್ರಕೃತಿಯೊಡಲಲ್ಲೆ ಎಂಬುದಾದ ಮೇಲೆ ಅದರ ಅತೀ ಸಾಮಿಪ್ಯತನವನ್ನು ಅನುಭವಿಸುವ ಈ ಮಂದಿ ತಮ್ಮ ಜೀವಸೆಲೆಗಳೆ ಘಾಸಿಗೀಡಾಗುತ್ತಿದೆ ಎಂಬುದಕ್ಕಾದರೂ ಈ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಬೇಕಾಗಿದೆ.ಬೇಕು ಬೇಕೆಂದಂತೆ ಆಡಲು ಪ್ರಕೃತಿಯೆಂಬುದು ಆಟಿಕೆಯಲ್ಲ, ನದಿಯೊಂದು ಹರಿದು ಸಮುದ್ರ ಸೇರುತ್ತದೆ ಎಂದರೆ ಅದಕ್ಕೆ ತನ್ನದೆ ಆದ ಕಾರಣ ಗಳಿರುತ್ತದೆ. ಈ ಪ್ರಕೃತಿ ನಿಯಮವನ್ನು ನಾವರಿತಿರಬೇಕು ಅಷ್ಟೆ. ಯಾವುದೋ ರಾಜಕೀಯ ಹಿತಾಸಕ್ತಿಗಾಗಿ ಪ್ರಕೃತಿಯನ್ನು ಆಟಿಕೆ ಮಾಡಿಕೊಳ್ಳುವದು ಸರಿಯಲ್ಲ.ಒಬ್ಬರ ಬದುಕನ್ನು ಕಸಿದು ಮಗದೊಬ್ಬರಿಗೆ ಬದುಕು ಕೊಡುತ್ತೇವೆ ಎಂಬುದು ಬರೀಯ ಸುಳ್ಳು. ಮನುಷ್ಯ ಏನು ಬೇಕಾದರೂ ಸೃಷ್ಟಿಸಬಲ್ಲ,ಅದರೆ ಪ್ರಕೃತಿಯ ಅಳಿವು ಆತನನ್ನೂ ಅಳಿಸುತ್ತದೆ. ಒಂದು ಸೌಧವಳಿದರೆ ನೂರು ಸೌಧ ಕಟ್ಟಬಹುದು, ಒಂದು ನದಿಯಳಿದರೆ ಮತ್ತೆಲ್ಲಿಂದ ತರೋದು.ಬಯಲು ಸೀಮೆಗಿಂತಲೂ ದೊಡ್ಡ ಬರವನ್ನು ಉತ್ತರ ಕರ್ನಾಟಕದ ಮಂದಿ ಅನುಭವಿಸುತಿದ್ದಾರೆ ಅತ್ತ ಯಾವ ನದಿ ತಿರುಗಿಸೋಣ???? ಹೀಗೆ ಮಾಡುತ್ತಾ ಹೋದರೆ ಇದಕ್ಕೆ ಕೊನೆಯೆಂದು? ಅದುದರಿಂದ ಸ್ಥಳೀಯ ಜಲಮೂಲಗಳನ್ನು ಅಭಿವೃದ್ದಿ ಪಡಿಸುವತ್ತ ಗಮನ ಹರಿಸಬೇಕು. ಮಳೆ ನೀರನ್ನು ಹಿಡಿದಿಟ್ಟು ಅದ ಇಂಗಿಸುವ ಕಾರ್ಯಕ್ಕೆ ಒತ್ತು ಕೊಡಬೇಕು.ಮಳೆ ಕೊಯ್ಲು ಮುಂತಾದ ಕಾರ್ಯಗಳು ಸಮಾರೋಪಾದಿಯಲ್ಲಿ ಇಂತಲ್ಲಿ ನಡೆಯಬೇಕು., ಇಂತಹ ಕಾರ್ಯಗಳು ನಡೆಯುತ್ತದೆ ಕಾರಣಬಯಲು ಸೀಮೆ ಮಳೆ ಇಲ್ಲದ ನಾಡೇನಲ್ಲ, ಇನ್ನಾದರೂ ಅಳಿದುಳಿದ ಕೆರೆಯನ್ನೂ ತನ್ನ ಜೀವ ಸೆಲೆ ಎಂಬ ಕಾರಣಕ್ಕಾದರೂ ತ್ಯಾಜ್ಯದಿಂದ ಮುಕ್ತವಾಗಿಸಿ ಅದ ಪುನಶ್ಚೇತನ ಗೊಳಿಸಬೇಕು.ಅಂತರ್ಜಲ ಹೆಚ್ಚಿಸುವ ನಿಟ್ಟಲ್ಲಿ ಸರ್ಕಾರದ ಪ್ರಾಯೋಜಕತ್ವದಲ್ಲಿ ಸಮರೋಪಾದಿಯಲ್ಲಿ ಕೆಲಸ ನಡೆದರೆ ಒಂದೈದು ವರುಷದೊಳಗೆ ನೀರ ಸಮಸ್ಯೆಯಿಂದ ಮುಕ್ತವಾಗಬಹುದು. ಇಂತಹ ಯೋಜನೆಗಳನ್ನು ಕೈಗೊಳ್ಳುವದ ಬಿಟ್ಟು ಪರಿಸರವ ಆಹುತಿ ಪಡೆದು ಸಾವಿರಾರು ಕಿ ಮಿ ನೀರು ಹರಿಸುತ್ತೇವೆ ಎಂಭ ಯೋಜನೆ ಅತಾರ್ಕಿಕವಾಗಿ ಕಾಣುತ್ತದೆ. ಇಷ್ಟರ ಮೇಲು ಎತ್ತಿನ ಹೊಳೆ ಯೋಜನೆ ಕಾರ್ಯರೂಪಕ್ಕೆ ಬರುತ್ತದೆ ಎಂದಾದಲ್ಲಿ ನಾವೆ ಕಟ್ಟುತ್ತಿರುವ ವಿನಾಶದ ಘೋರಿಗೆ ಮತ್ತೊಂದು ಕಲ್ಲು ಸೇರ್ಪಡೆಗೊಂಡಿತೆಂಬುದೆ ಸರಿ.